ಲಾಲು, ನಿತೀಶ್ ದೂರ ದೂರ..!: ಆರ್'ಜೆಡಿ , ಜೆಡಿಯು ಮೈತ್ರಿಯಲ್ಲಿ ಬಿರುಕು?
ಆರ್ಜೆಡಿ-ಜೆಡಿಯು ಮೈತ್ರಿಯಲ್ಲಿ ಬಿರುಕು ಉಂಟಾಗಿದೆ. ನಿರಂತರವಾಗಿ ಲಾಲೂ ಆಪ್ತರು ಭ್ರಷ್ಟಾಚಾರದ ಆರೋಪಗಳಲ್ಲಿ ಸಿಲುಕಿರುವುದನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಹಾಗೂ ಲಾಲೂ ಪ್ರಸಾದ್ ಸಂಗವನ್ನು ತ್ಯಜಿಸಲು ಚಿಂತನೆ ನಡೆಸಿದ್ದಾರೆ. ಹೀಗಾಗಿ ಬಿಹಾರದಲ್ಲಿ ಮಹಾಮೈತ್ರಿ ಕಳಚಿಕೊಳ್ಳುವ ಎಲ್ಲಾ ಸಾಧ್ಯತೆಗಳು ಸನ್ನಿಹಿತವಾಗಿದೆ.
ಬಿಹಾರ(ಜು.10): ಆರ್ಜೆಡಿ-ಜೆಡಿಯು ಮೈತ್ರಿಯಲ್ಲಿ ಬಿರುಕು ಉಂಟಾಗಿದೆ. ನಿರಂತರವಾಗಿ ಲಾಲೂ ಆಪ್ತರು ಭ್ರಷ್ಟಾಚಾರದ ಆರೋಪಗಳಲ್ಲಿ ಸಿಲುಕಿರುವುದನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಹಾಗೂ ಲಾಲೂ ಪ್ರಸಾದ್ ಸಂಗವನ್ನು ತ್ಯಜಿಸಲು ಚಿಂತನೆ ನಡೆಸಿದ್ದಾರೆ. ಹೀಗಾಗಿ ಬಿಹಾರದಲ್ಲಿ ಮಹಾಮೈತ್ರಿ ಕಳಚಿಕೊಳ್ಳುವ ಎಲ್ಲಾ ಸಾಧ್ಯತೆಗಳು ಸನ್ನಿಹಿತವಾಗಿದೆ.
ಲಾಲೂ ಮಕ್ಕಳ ರಾಜೀನಾಮೆಗೆ ಬಿಜೆಪಿ ಪಟ್ಟು
ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್, ನಿತೀಶ್ ಕುಮಾರ್ ಮೈತ್ರಿ ಉಳಿಯುವುದು ಅನುಮಾನವಾಗಿದೆ. ಲಾಲೂ ಮಕ್ಕಳು ಹಾಗೂ ಆಪ್ತರ ಮನೆ ಮೇಲೆ ನಿರಂತರವಾಗಿ ಸಿಬಿಐ ದಾಳಿ ನಡೆಯುತ್ತಿದೆ. ಇದರಿಂದ ಬಿಹಾರ ಸರ್ಕಾರ ತೀವ್ರ ಮುಜುಗರಕ್ಕೀಡಾಗಿದ್ದು, ಸರ್ಕಾರಕ್ಕೆ ಬೆಂಬಲ ನೀಡಿರುವ ಲಾಲೂ ಸಂಗವನ್ನು ತ್ಯಜಿಸಲು ನಿತೀಶ್ ಕುಮಾರ್ ಚಿಂತನೆ ನಡೆಸಿದ್ದಾರೆ.
ಮೊನ್ನೆ ಭ್ರಷ್ಟಾಚಾರ ಆರೋಪದಡಿ ಲಾಲೂ ಪ್ರಸಾದ್ ಆಪ್ತರ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ನಿನ್ನೆ ಲಾಲೂ ಪುತ್ರರ ಮನೆ ಮೇಲೆ ಸಿಬಿಐ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ವಿರೋಧ ಪಕ್ಷವಾಗಿರುವ ಬಿಜೆಪಿ, ಡಿಸಿಎಂ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ.
ಇದನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಒಂದು ವೇಳೆ ಲಾಲೂ ಸ್ನೇಹ ತ್ಯಜಿಸಿದ್ರೆ ಸರ್ಕಾರ ಪತನವಾಗುವುದು ಖಚಿತ. ಹೀಗಾಗಿ ತಮ್ಮ ಮುಂದಿನ ನಡೆ ಬಗ್ಗೆ ಚರ್ಚಿಸಲು ಜುಲೈ 11ರಂದು ಜೆಡಿಯು ಕಾರ್ಯಕಾರಿಣಿ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಡಿಸಿಎಂ ರಾಜೀನಾಮೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಇತ್ತ ಆರ್ಜೆಡಿ ಸಭೆ ಕರೆದಿರುವ ಬೆನ್ನಲ್ಲೇ ನಾಳೆ ಆರ್ಜೆಡಿ ಮುಖ್ಯಸ್ಥ ಲಾಲೂ ಕೂಡ ಸಭೆ ಕರೆದಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇದರ ಜೊತೆ ಕಾಂಗ್ರೆಸ್ ಆರ್ಜೆಡಿ ಬೆನ್ನಿಗೆ ನಿಂತಿದೆ.
ಒಟ್ಟಾರೆ ಬಿಹಾರದ ಮೈತ್ರಿ ಸರ್ಕಾರದಲ್ಲಿ ದೊಡ್ಡ ಬಿರುಕು ಕಾಣಿಸಿದ್ದು, ನಾಳಿನ ಜೆಡಿಯು ಸಭೆಯತ್ತ ಎಲ್ಲರ ಚಿತ್ತ ಹರಿದಿದೆ. ಒಂದು ವೇಳೆ ನಿತೀಶ್ ಕುಮಾರ್ ಲಾಲೂ ಸ್ನೇಹವನ್ನು ತ್ಯಜಿಸಿದ್ರೆ, ಜೆಡಿಯುಗೆ ಬೆಂಬಲ ನೀಡುವುದು ಯಾರು ಎಂಬ ಯಕ್ಷ ಪ್ರಶ್ನೆ ಮೂಡಿದೆ.