Asianet Suvarna News Asianet Suvarna News

ಕೆಪಿಸಿಸಿ ಅಧ್ಯಕ್ಷತೆ: ದಿನೇಶ್‌ ಪರ ವೇಣು ಒಲವು..?

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಆಗಮನದಿಂದ ಕೆಪಿಸಿಸಿ ಅಧ್ಯಕ್ಷ ಗಾದಿ ಲಾಬಿ ಜೋರು ಪಡೆದಿದೆ. ಬುಧವಾರ ತಡರಾತ್ರಿಯೇ ದಿನೇಶ್‌ ಗುಂಡೂರಾವ್‌ ಬಣ ವೇಣುಗೋಪಾಲ್‌ ಭೇಟಿ ಮಾಡಿ ಲಾಬಿ ಕಸರತ್ತು ನಡೆಸಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್‌ ಹಿರಿಯ ನಾಯಕರು ನೇರವಾಗಿ ಹೈಕಮಾಂಡ್‌ ಭೇಟಿಗೆ ಸಮಯಾವಕಾಶ ಕೋರಿರುವುದಾಗಿ ತಿಳಿದುಬಂದಿದೆ.

Dinesh Gundu Rao next KPCC Chief

ಬೆಂಗಳೂರು :  ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಆಗಮನದಿಂದ ಕೆಪಿಸಿಸಿ ಅಧ್ಯಕ್ಷ ಗಾದಿ ಲಾಬಿ ಜೋರು ಪಡೆದಿದೆ. ಬುಧವಾರ ತಡರಾತ್ರಿಯೇ ದಿನೇಶ್‌ ಗುಂಡೂರಾವ್‌ ಬಣ ವೇಣುಗೋಪಾಲ್‌ ಭೇಟಿ ಮಾಡಿ ಲಾಬಿ ಕಸರತ್ತು ನಡೆಸಿದ್ದು, ಇದರ ಬೆನ್ನಲ್ಲೇ ಕಾಂಗ್ರೆಸ್‌ ಹಿರಿಯ ನಾಯಕರು ನೇರವಾಗಿ ಹೈಕಮಾಂಡ್‌ ಭೇಟಿಗೆ ಸಮಯಾವಕಾಶ ಕೋರಿರುವುದಾಗಿ ತಿಳಿದುಬಂದಿದೆ.

ಇದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ತಿಕ್ಕಾಟ ಜೋರು ಪಡೆದಿದ್ದು, ತೀವ್ರ ಕುತೂಹಲ ಹುಟ್ಟು ಹಾಕಿದೆ.

ಗುರುವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಲು ಕೆ.ಸಿ. ವೇಣುಗೋಪಾಲ್‌ ಬುಧವಾರ ತಡರಾತ್ರಿ ನಗರಕ್ಕೆ ಆಗಮಿಸಿದರು. ಇದರ ಬೆನ್ನಲ್ಲೇ ಕೆ.ಸಿ. ವೇಣುಗೋಪಾಲ್‌ರನ್ನು ಭೇಟಿ ಮಾಡಿದ ದಿನೇಶ್‌ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕಾಗಿ ಲಾಬಿ ನಡೆಸಿದರು. ಅವರ ಪರವಾಗಿ ರಿಜ್ವಾನ್‌ ಅರ್ಷದ್‌ ಸೇರಿ ಕೆಲ ಯುವ ನಾಯಕರ ಬಳಗ ತೀವ್ರ ಲಾಬಿ ನಡೆಸಿದರು. ಈ ವೇಳೆ ವೇಣುಗೋಪಾಲ್‌ ಹಾಗೂ ದಿನೇಶ್‌ ಗುಂಡೂರಾವ್‌ ತಂಡದೊಂದಿಗೆ ನಡೆದ ಮಾತುಕತೆ ಗಮನಿಸಿದರೆ ವೇಣುಗೋಪಾಲ್‌ ಅವರು ದಿನೇಶ್‌ ಸಹಮತ ಹೊಂದಿರುವ ಲಕ್ಷಣ ಕಂಡು ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಸಿಡಿದೆದ್ದಿರುವ ಕೆ.ಎಚ್‌. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಹಿರಿಯ ಆಕಾಂಕ್ಷಿಗಳು ಸಿಡಿದಿದ್ದಾರೆ. ಕೆ.ಸಿ. ವೇಣುಗೋಪಾಲ್‌ ಹೈಕಮಾಂಡ್‌ಗೆ ಏಕಪಕ್ಷೀಯ ಮಾಹಿತಿ ನೀಡುತ್ತಿದ್ದಾರೆ. ವಸ್ತುಸ್ಥಿತಿ ಸ್ಪಷ್ಟವಾಗಿ ಹೈಕಮಾಂಡ್‌ ತಿಳಿಸುತ್ತಿಲ್ಲ. ಇದನ್ನು ಹೈಕಮಾಂಡ್‌ ಗಮನಕ್ಕೆ ತರಲು ದೆಹಲಿ ಭೇಟಿಗೆ ಸಮಯವಕಾಶ ಕೇಳಿದ್ದಾರೆ ಎಂದು ತಿಳಿದುಬಂದಿದೆ. ಕೆ.ಸಿ. ವೇಣುಗೋಪಾಲ್‌ ನಡೆಗಳು ತಮಗೆ ಸಹಮತ ತೋರದ ಹಿನ್ನೆಲೆಯಲ್ಲಿ ಹೈಕಮಾಂಡ್‌ ಹಂತದಲ್ಲೇ ನೇರವಾಗಿ ಚರ್ಚಿಸಲು ಹಿರಿಯ ನಾಯಕರು ಮುಂದಾಗಿದ್ದಾರೆ. ಅಧ್ಯಕ್ಷ ಗಾದಿ ಲಾಬಿಯೂ ತೀವ್ರ ಕುತೂಹಲ ಮೂಡಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಂಸದರ ಸಭೆಯಲ್ಲಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ನಡೆಸಲಾಗಿತ್ತು. ಚರ್ಚೆಯಲ್ಲಿ ಹಿರಿಯ ನಾಯಕರು ಮತ್ತು ಸಂಸದರಾದ ಕೆ.ಎಚ್‌. ಮುನಿಯಪ್ಪ, ಹರಿಪ್ರಸಾದ್‌ ಸೇರಿದಂತೆ ಹಲವು ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಲೋಕಸಭೆ ಚುನಾವಣೆ ನಿಟ್ಟಿನಲ್ಲಿ ಅಧ್ಯಕ್ಷರ ನೇಮಕ ವೇಳೆ ಎಲ್ಲರನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.

ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಾವುದೇ ಕಾರಣಕ್ಕೂ ಏಕಪಕ್ಷೀಯವಾಗಿ ಆಗಬಾರದು. ಯಾರು ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸುವಲ್ಲಿ ಶಕ್ತರಿದ್ದಾರೋ ಮತ್ತು ಸಂಪತ್ತು ಕ್ರೋಡೀಕರಣ ಮಾಡಲು ಶಕ್ತರಿದ್ದಾರೋ ಅಂತಹವರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಹೇಳಲಾಗಿತ್ತು. ಆದರೆ, ಈಗ ತಡರಾತ್ರಿ ನಡೆದ ಸಭೆಯಿಂದ ಹಿರಿಯ ನಾಯಕರು ಹುಬ್ಬೇರುವಂತಾಗಿದ್ದು, ನೇರವಾಗಿ ಹೈಕಮಾಂಡ್‌ ಭೇಟಿ ಮಾಡಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios