ಮಧ್ಯಪ್ರದೇಶ ಸರಕಾರದ ಕಾಲೆಳೆಯಲು ಹೋಗಿ ಹಳ್ಳಕ್ಕೆ ಬಿದ್ದ ದಿಗ್ವಿಜಯ್ ಸಿಂಗ್ ನಂತರ ಕ್ಷಮೆ ಯಾಚಿಸಿದ್ದಾರೆ. ಸ್ನೇಹಿತನ ಮಾತು ನಂಬಿ ಈ ಬಗೆಯ ಟ್ವೀಟ್ ಮಾಡುವ ಮುನ್ನ ಕೊಂಚ ಯೋಚನೆ ಮಾಡಿದ್ದರೆ ಸಿಂಗ್ ಕ್ಷಮೆ ಕೇಳುವ ಪ್ರಮೇಯ ಬರುತ್ತಿರಲಿಲ್ಲ. ಹಾಗಾದರೆ ಸಿಂಗ್ ಮಾಡಿದ ಎಡವಟ್ಟೇನು? 

ಭೋಪಾಲ್: ರಾಜಕಾರಣದಲ್ಲಿ, ವೈಯಕ್ತಿಕ ಜೀವನದಲ್ಲಿ ವಿವಾದಗಳಿಂದ ಸುದ್ದಿ ಮಾಡುತ್ತಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು ಕ್ಷಮೆ ಕೂಡಾ ಕೇಳಿದ್ದಾರೆ. ಪಾಕಿಸ್ತಾನದ ಸೇತುವೆಯೊಂದರ ಚಿತ್ರವನ್ನು ಮಧ್ಯಪ್ರದೇಶದ ಭೋಪಾಲ್ ನ ರೖಲ್ವೆ ಸೇತುವೆ ಎಂದು ಟ್ವೀಟ್ ಮಾಡಿದ್ದು ಸುದ್ದಿ ಸಂಸ್ಥೆಯ ಕೈಗೆ ಸಿಕ್ಕಿಬಿದ್ದಿದ್ದಾರೆ.

Add Asianetnews Kannada as a Preferred SourcegooglePreferred

ಪಾಕಿಸ್ತಾನದ ಸೇತುವೆ ಚಿತ್ರ ಹಾಕಿದ್ದ ದಿಗ್ವಿಜಯ್ ಸಿಂಗ್, ಇದು ಭೋಪಾಲ್ ನ ಸುಭಾಷ್ ನಗರದ ಬಳಿ ನಿರ್ಮಾಣ ಹಂತದಲ್ಲಿರುವ ರೈಲೈ ಬ್ರಿಜ್ಜ್, ಇದರ ಮೇಲಿರುವ ಬಿರುಕುಗಳು ಸೇತುವೆ ನಿರ್ಮಾಣದ ಗುಣಮಟ್ಟವನ್ನು ಸಾರಿ ಹೇಳುತ್ತಿವೆ. ವಾರಣಾಸಿಯಲ್ಲಿ ಅವಘಡವಾಗಿ ಜನರು ಪ್ರಾಣ ಕಳೆದುಕೊಂಡರೋ ಅದು ಇಲ್ಲಿ ಆಗದಿದ್ದರೆ ಸಾಕು, ಎಂದು ಟ್ವೀಟ್ ಮಾಡಿ ಮಧ್ಯ ಪ್ರದೇಶ ಸರಕಾರಕ್ಕೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದ್ದರು. ಆದರೆ ಮಾಧ್ಯಮ ಸಂಸ್ಥೆಯೊಂದು ಈ ಫೋಟೋದ ಅಸಲಿ ಕತೆಯನ್ನು ಪತ್ತೆಹಚ್ಚಿದಾಗ ಈ ಚಿತ್ರ ಪಾಕಿಸ್ತಾನದ ರಾವಲ್ಪಿಂಡಿಯದ್ದು ಎಂದು ಗೊತ್ತಾಗಿದೆ.

ಈ ಬಿರುಕು ಮೂಡಿದ ಫಿಲ್ಲರ್ ಫೋಟೋವನ್ನು ಸಾಮಾಜಿಕ ತಾಣಗಳಲ್ಲಿ ಅನೇಕ ಸಾರಿ ಬಳಸಲಾಗಿದೆ. ಪ್ರತಿ ಸಾರಿ ಬೇರೆ ಬೇರೆ ಊರಿನ ಹೆಸರು ಹಾಕಲಾಗಿದೆ. ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ದಿಗ್ವಿಜಯ್ ಸಿಂಗ್, ಈ ವಿಚಾರಕ್ಕೆ ನಾನು ಮೊದಲು ಕ್ಷಮೆ ಕೇಳುತ್ತೇನೆ. ನನ್ನ ಸ್ನೇಹಿತರೊಬ್ಬರು ಕಳುಹಿಸಿದ ಫೋಟೋವನ್ನು ನಾನು ಟ್ವೀಟ್ ಮಾಡಿದ್ದೆ ಎಂದಿದ್ದಾರೆ.

ಕೆಲದ ದಿನಗಳ ಹಿಂದೆ ರೈಲ್ವೆ ಇಲಾಖೆಯನ್ನು ಗುರಿ ಮಾಡಿ ಟ್ವೀಟ್ ಮಾಡಿದ್ದ ಶಬಾನಾ ಆಜ್ಮಿ ಮಲೇಶಿಯಾದ ವಿಡಿಯೋವೊಂದನ್ನು ಬಳಸಿ ನಂತರ ಕ್ಷಮೆ ಕೇಳಿದ್ದರು. ಇದೀಗ ದಿಗ್ವಿಜಯ್ ಸಿಂಗ್ ಸರದಿ.