ಹೈ-ಕ ಕನಸಿನ ರೈಲು ಮಾರ್ಗ ಉದ್ಘಾಟನೆಗೆ ದಿನಗಣನೆ: ಕ್ರೆಡಿಟ್'ಗಾಗಿ ಕಾಂಗ್ರೆಸ್-ಬಿಜೆಪಿ ಜಟಾಪಟಿ
ಯಾರದೋ ದುಡ್ಡು ಯಲ್ಲಮ್ಮ ಜಾತ್ರೆ, ಸ್ಕೀಮ್ ನಮ್ಮದು ಬಟನ್ ಒತ್ತೋರು ಮೋದಿನಾ..? ಎಲೆಕ್ಷನ್ ಹೆಸರಿನಲ್ಲಿ ನಡೆಯುತ್ತಿದಿಯಂತೆ ಉದ್ಘಾಟನಾ ಪಾಲಿಟಿಕ್ಸ್. ಇದು ಹೈ-ಕ ಭಾಗದ ಬಹು ನಿರೀಕ್ಷಿತ ಯೋಜನೆ ಉದ್ಘಾಟನೆಗೂ ಮುನ್ನ ಶುರುವಾದ ರಾಜಕೀಯ ಜಟಾಪಟಿ.
ಬೀದರ್(ಅ.25): ಅಕ್ಟೋಬರ್ 29ರಂದು ಹೈದ್ರಾಬಾದ್ ಕರ್ನಾಟಕ ಭಾಗದ ಜನರ ಕನಸಿನ ರೈಲು ಮಾರ್ಗಕ್ಕೆ ಚಾಲನೆಗೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ 110 ಕಿಲೋ ಮೀಟರ್ ಉದ್ದದ ರೈಲು ಮಾರ್ಗಕ್ಕೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ. ಆದ್ರೆ, ಬಿಜೆಪಿ ಈ ಕಾರ್ಯಕ್ರಮವನ್ನು ಬಿಜೆಪಿ ಸಮಾವೇಶದ ರೀತಿ ಮಾಡಲು ಹೊರಟಿದೆ ಅನ್ನೋದು ಕಾಂಗ್ರೆಸ್ ಆರೋಪ. ಕೇಂದ್ರ ಸರ್ಕಾರದ ಜೊತೆಯಲ್ಲಿ ರಾಜ್ಯ ಸರ್ಕಾರ ಸಹ ಹಣ ಬಿಡುಗಡೆ ಮಾಡಿದ್ರೂ ರಾಜ್ಯ ಕಾಂಗ್ರೆಸ್ ನಾಯಕರನ್ನು ಕಾರ್ಯಕ್ರಮಕ್ಕೆ ಇದುವರೆಗೂ ಆಹ್ವಾನಿಸಿಲ್ಲ.. ನನಗೂ ಕೂಡ ಆಹ್ವಾನ ನೀಡಿಲ್ಲ ಅಂತಿದ್ದಾರೆ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ್ ಖರ್ಗೆ.
ಖರ್ಗೆ ಆರೋಪಕ್ಕೆ ಬೀದರ್ ಸಂಸದ ಭಗವಂತ್ ಖೂಬಾ ತಿರುಗೇಟು ನೀಡಿದ್ದು. 1998-99 ರಲ್ಲಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರದ ಅವಧಿಯಲ್ಲಿ ಈ ರೈಲ್ವೆ ಯೋಜನೆಗೆ ಚಾಲನೆ ಸಿಕ್ಕಿದೆ. ಬಳಿಕ ಬಂದ ಯುಪಿಎ ಸರ್ಕಾರದ 10 ವರ್ಷದ ಅವಧಿಯಲ್ಲಿ ಕಾಮಗಾರಿ ನೆನೆಗುದಿಗೆ ಬಿತ್ತು.. ಮಲ್ಲಿಕಾರ್ಜುನ್ ಖರ್ಗೆ ಅವರೇ ಕೇಂದ್ರ ರೈಲ್ವೆ ಸಚಿವರಾಗಿದ್ದರೂ ಈ ಕಾಮಗಾರಿ ಪುರ್ಣಗೊಳಿಸಿಲ್ಲ.. ಈಗ ರಾಜಕೀಯ ಮಾಡಲು ಬಂದಿದ್ದಾರೆ ಅನ್ನೊದು ಬಿಜೆಪಿ ಸಂಸದ ಭಗವಂತ್ ಖೂಬಾ ಆರೋಪ.
ಹೊಗ್ಲಿ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಯವರನ್ನಾದ್ರೂ ಕರೆಯಬಹುದಿತ್ತು.. ಅವರನ್ನೂ ಆಹ್ವಾನಿಸದೇ ಬಿಜೆಪಿ ರಾಜಕೀಯ ಮಾಡಲು ಹೊರಟಿದೆ ಅನ್ನೋದು ವಿಧಾನಪರಿಷತ್ ಸದಸ್ಯ ವಿಜಯ್ ಸಿಂಗ್ ಆರೋಪ.
ಒಟ್ಟಿನಲ್ಲಿ, ಹೈ-ಕ ಭಾಗದ ಕನಸಿನ ರೈಲು ಕೆವಲೇ ದಿನಗಲಲ್ಲಿ ಓಡಲಿದೆ ಅನ್ನೋ ಖುಷಿ ಆ ಭಾಗದ ಜನರಿಗಿದೆ. ಆದ್ರೆ, ಬಿಜೆಪಿಯವರು ಈ ಕಾರ್ಯಕ್ರಮ ಮೂಲಕ ಕ್ರೆಡಿಟ್ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ಖ್ಯಾತೆ ತೆಗೆದಿದ್ದು, ರಾಜಕೀಯ ಕೆಸರೆರಚಾಟ ಆರಂಭವಾಗಿದೆ.