ಪ್ರೀತಿಸಿದ ಕಾರಣಕ್ಕೆ ಧಾರವಾಡದ ಯುವಕನ ಕಿಡ್ನಿಯೇ ಡ್ಯಾಮೇಜ್
ಪ್ರೀತಿ-ಪ್ರೇಮದ ವಿಚಾರ ಒಮ್ಮೊಮ್ಮೆ ಯಾವ ಹಂತದ ವಿಕೋಪಕ್ಕೆ ಹೋಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಪ್ರತೀಸಿದ ತಪ್ಪಿಗೆ ಯುವಕ ನರಕಯಾತನೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿ[ಜೂ. 24] ಪ್ರೀತಿಸಿದ ಕಾರಣಕ್ಕೆ ಯುವತಿ ಮನೆಯವರಿಂದ ಯುವಕನ ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್ ಮಾಡಿ ಯುವಕನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದು ಅಲ್ಲದೇ ಶಾಕ್ ಟ್ರೀಟ್ ಮೆಂಟ್ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ವಾಸ ಮಾಡುತ್ತಿದ್ದ ಧಾರವಾಡ ತಾಲೂಕಿನ ಗರಗ ಗ್ರಾಮದ ಯುವಕ ಮಡಿವಾಳ ರಾಯಬಾಗಕರ ಹಲ್ಲೆಗೆ ಒಳಗಾಗಿದ್ದಾನೆ. ಎರಡು ವರ್ಷದ ಹಿಂದೆ ಪ್ರೀತಿ-ಪ್ರೇಮದ ವಿಚಾರ ಮನೆಯಲ್ಲಿ ಗೊತ್ತಾಗಿತ್ತು. ಊರು ಬಿಟ್ಟು ಯುವಕ-ಯುವತಿ ದೂರವಾಗಿದ್ದರೂ ಮಡಿವಾಳ ರಾಯಬಾಗಕರ ಯುವತಿಯೊಂದಿಗೆ ಸಂಪರ್ಕದಲ್ಲಿದ್ದ. ಇದು ಮತ್ತೆ ಗೊತ್ತಾಗಿ ಬೆಳಗಾವಿಗೆ ಬಂದು ಯುವಕನನ್ನು ಯುವತಿ ಮನೆಯವರು ಕಿಡ್ನಾಪ್ ಮಾಡಿದ್ದಾರೆ.
ಉಳಪ್ಪ ಚಿಕ್ಕಪ್ಪ, ಸಿದ್ದಪ್ಪ ಚಿಕ್ಕಪ್ಪ, ಮಡಿವಾಳ ಕಾಳೆ ಉಪಾಶಿ ನಾಧಾಪ್ ಎಂಬುವರು ಕಿಡ್ನಾಪ್ ಆರೋಪ ಎದುರಿಸುತ್ತಿದ್ದಾರೆ. ಒಂದು ವಾರದ ಹಿಂದೆ ಕಿಡ್ನಾಪ್ ಮಾಡಿ ಚಿತ್ರಹಿಂಸೆ ನೀಡಿದ್ದಾರೆ. ಶಾಕ್ ನೀಡಿದ್ದರಿಂದ ಯುವಕನ ಕಿಡ್ನಿಗೆ ಹಾನಿಯಾಗಿದೆ.
ಸದ್ಯ ಯುವಕನಿಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ನಂತರ ಪೊಲೀಸ್ ಆಯುಕ್ತರ ಬಳಿ ಯುವಕನ ತಂದೆ ತಾಯಿ ಕರೆದುಕೊಂಡು ಬಂದ ಶಾಸಕ ಅಮೃತ ದೇಸಾಯಿ ಎಲ್ಲ ವಿವರ ತಿಳಿಸಿದ್ದಾರೆ. ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಕೂಡ ಈ ವೇಳೆ ಜತೆಗೊದ್ದರು. ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.