ಪೊಲೀಸರಿಗೆ ನಗದು ಬದಲು ಮತ್ತೆ ಪಡಿತರ ವಿತರಣೆ ಜಾರಿ?
ಪೊಲೀಸ್ ಇಲಾಖೆ ಸಿಬ್ಬಂದಿಗೆ ಆಹಾರ ಧಾನ್ಯ ವಿತರಣೆ ಬದಲಿಗೆ 400 ರೂಪಾಯಿ ನೀಡುವ ಪದ್ಧತಿಗೆ ತಿಲಾಂಜಲಿ ನೀಡಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕುಮಾರ ದತ್ತಾ ಒಲವು ತೋರಿದ್ದಾರೆ.
ಬೆಳಗಾವಿ: ಪೊಲೀಸ್ ಇಲಾಖೆ ಸಿಬ್ಬಂದಿಗೆ ಆಹಾರ ಧಾನ್ಯ ವಿತರಣೆ ಬದಲಿಗೆ 400 ರೂಪಾಯಿ ನೀಡುವ ಪದ್ಧತಿಗೆ ತಿಲಾಂಜಲಿ ನೀಡಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕುಮಾರ ದತ್ತಾ ಒಲವು ತೋರಿದ್ದಾರೆ.
ಖಾನಾಪುರ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರ ವಾರ ಆಯೋಜಿಸಿದ್ದ ನಾವು ಪೊಲೀಸ್- ಒಂದೇ ಕುಟುಂಬ ಸಂವಾದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿ, ಪಡಿತರ ಆಹಾರಧಾನ್ಯ ವಿತರಣೆ ರದ್ದುಗೊಳಿಸಿ ಸರ್ಕಾರ ಪೊಲೀಸ್ ಸಿಬ್ಬಂದಿಗೆ ಮಾಸಿಕ ರೂ. 400 ನೀಡುತ್ತಿದೆ. ಆದರೆ, ಈ ಹಣ ಕೈಗೆ ಬಂದರೆ ಎಲ್ಲಿ ಹೋಗುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ.
ಹಾಗಾಗಿ, ಹಣದ ಬದಲಿಗೆ ಪಡಿತರ ಧಾನ್ಯವನ್ನು ವಿತರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಇದೇ ವೇಳೆ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಾರದಲ್ಲಿ ಒಂದು ದಿನ ಪೊಲೀಸರಿಗೆ ಕಡ್ಡಾಯ ರಜೆಯನ್ನು ಈಗಾಗಲೇ ಘೋಷಿಸಲಾಗಿದ್ದು, ಅದರ ಸಂಪೂರ್ಣ ಹೊಣೆಯನ್ನು ಠಾಣಾಧಿಕಾರಿಗೆ ವಹಿಸಲಾಗಿದೆ ಎಂದು ತಿಳಿಸಿದರು.
ಕಾರವಾರ ನೌಕಾನೆಲೆಯಲ್ಲಿ ಆತಂಕವಾದಿಗಳು ನುಸುಳಿದ್ದಾರೆ ಎಂಬುದು ಕೇವಲ ವದಂತಿಯಾಗಿದ್ದು ಈ ಹಿನ್ನೆಲೆಯಲ್ಲಿ ಶೋಧಕಾರ್ಯ ನಡೆಸಿ ಖಚಿತಪಡಿಸಿಕೊಳ್ಳಲಾಗಿದೆ ಎಂದರು.