ಇಲ್ಲಿ ನೀರಿಲ್ಲದ್ದಕ್ಕೆ ಗಣಪತಿ ವಿಸರ್ಜನೆ ಇಲ್ಲ, ಮರುಬಳಕೆಗೆ ಜಿಲ್ಲಾಡಳಿದ ವಶಕ್ಕೆ!
ಇಲ್ಲಿ ನೀರಿಲ್ಲದ್ದಕ್ಕೆ ಗಣಪತಿ ವಿಸರ್ಜನೆ ಇಲ್ಲ, ಮರುಬಳಕೆಗೆ ಜಿಲ್ಲಾಡಳಿತಕ್ಕೆ ಹಸ್ತಾಂತರ| ಗಣೇಶೋತ್ಸವವನ್ನು ವಿಶಿಷ್ಟ ಹಾಗೂ ಪರಿಸರ ಸ್ನೇಹಿಯಾಗಿ ಆಚರಣೆ
ಲಾತೂರ್[ಸೆ.16]: ಸಾಮಾನ್ಯವಾಗಿ ಪೂಜೆ ಬಳಿಕ ಗಣೇಶನ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಿ ವಿಸರ್ಜನೆ ಮಾಡುವುದು ಸಂಪ್ರದಾಯ. ಆದರೆ ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ಮಹಾರಾಷ್ಟ್ರದ ಲಾತೂರ್ನಲ್ಲಿ ಮೂರ್ತಿಯನ್ನು ನೀರಿನ ಮೂಲಗಳಲ್ಲಿ ವಿಸರ್ಜನೆ ಮಾಡಿ ಕಲುಷಿತಗೊಳಿಸುವ ಬದಲು, ಮೂರ್ತಿಯನ್ನು ಮರುಬಳಕೆಗೆ ನೀಡುವ ಮೂಲಕ ಗಣೇಶೋತ್ಸವವನ್ನು ವಿಶಿಷ್ಟ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಲಾಗಿದೆ.
ಈ ಬಾರಿ ಮಳೆ ಕೊರತೆಯಿಂದ ನೀರಿನ ಸಮಸ್ಯೆ ಉಂಟಾಗಿದ್ದರಿಂದ ಲಾತೂರ್ ಜಿಲ್ಲಾಡಳಿತ ಇಂಥದ್ದೊಂದು ನಿರ್ಧಾರ ಕೈಗೊಂಡು,ಹತ್ತಾರು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಮೂರ್ತಿಯನ್ನು ವಿಸರ್ಜನೆ ಮಾಡುವ ಬದಲು ಜಿಲ್ಲಾಡಳಿತಕ್ಕೆ ನೀಡಲು ಮನವಿ ಮಾಡಿತ್ತು. ಅಲ್ಲದೇ ನೀರಿನ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ನೂರಾರು ಸಮಿತಿಗಳು ಆಚರಣೆ ಬಳಿಕ ಗಣೇಶನ ಮೂರ್ತಿಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಿವೆ.
ಗಣೇಶ ಮೂರ್ತಿಯನ್ನು ವಿಸರ್ಜಿಸುವ ಬದಲು ಅಂಗಳದಲ್ಲಿಟ್ಟರೆ ಬೆಳೆಯುತ್ತದೆ ಸಸಿ!
ಅಲ್ಲದೇ ವಿಸರ್ಜನಾ ಸ್ಥಳದಿಂದಲೂ ಮೂರ್ತಿಗಳನ್ನು ಪಡೆಯಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದರಿಂದ, 485 ಬೃಹತ್ ಹಾಗೂ 28,775 ಸಣ್ಣ ಮೂರ್ತಿಗಳನ್ನು ಪಡೆಯಲಾಗಿದೆ. ಈ ಮೂರ್ತಿಗಳನ್ನು ಮರುಬಳಕೆಗೆ ತಯಾರಕರಿಗೆ ಉಚಿತವಾಗಿ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ಸಚಿನ್ ಸಾಂಗ್ಲೆ ತಿಳಿಸಿದ್ದಾರೆ.