5 ದಿನ ಕೆಲವು ರೈಲು ಸಂಚಾರ ರದ್ದು
ಕೆಲ ರೈಲುಗಳ ಸಂಚಾರವನ್ನು ಐದು ದಿನಗಳ ಕಾಲ ರದ್ದು ಮಾಡಲಾಗಿದೆ. ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿ ಹಿನ್ನೆಲೆ ರದ್ದು ಮಾಡಲಾಗುತ್ತಿದೆ.
ಬೆಂಗಳೂರು[ಜು.3] : ನೈಋುತ್ಯ ರೈಲ್ವೆಯು ನಗರದ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಜು.3ರಿಂದ 7ರ ವರೆಗೆ ಈ ಮಾರ್ಗದಲ್ಲಿ ಸಂಚರಿಸುವ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಬೆಂಗಳೂರು ಕಂಟೋನ್ಮೆಂಟ್-ವಿಜಯವಾಡ- ಬೆಂಗಳೂರು ಕಂಟೋನ್ಮೆಂಟ್ ಪ್ಯಾಸೆಂಜರ್ ರೈಲು (ಸಂಖ್ಯೆ 56503/56504) ಸಂಚಾರವನ್ನು ಜು.3ರಿಂದ ಜು.7ರ ವರೆಗೆ ರದ್ದುಗೊಳಿಸಲಾಗಿದೆ. ಅಂತೆಯೆ ವೈಟ್ಫೀಲ್ಡ್-ಬಾಣಸವಾಡಿ-ವೈಟ್ಫೀಲ್ಡ್ ರೈಲು (ಸಂಖ್ಯೆ 06577/06578), ಬಾಣಸವಾಡಿ- ಹೊಸೂರು-ಬಾಣಸವಾಡಿ ಡೆಮು ರೈಲು (ಸಂಖ್ಯೆ06571/07572, 06573/06574) ಸಂಚಾರವನ್ನು ಜು.3ರಿಂದ ಜು.6ರ ವರೆಗೆ ರದ್ದುಗೊಳಿಸಲಾಗಿದೆ.
ಸಂಬಲ್ಪುರ್-ಬಾಣಸವಾಡಿ ವಿಶೇಷ ರೈಲು( ಸಂಖ್ಯೆ 08301) ಜು.3, 10 ಹಾಗೂ 17ರಂದು ಕೃಷ್ಣರಾಜಪುರಂ ವರೆಗೆ ಮಾತ್ರ ಸಂಚರಿಸಲಿದೆ. ಅಲ್ಲದೆ, ಬಾಣಸವಾಡಿ-ಸಂಬಲ್ಪುರ ವಿಶೇಷ ರೈಲು ಜು.4, 11 ಹಾಗೂ 18ರಂದು ಬಾಣಸವಾಡಿ ಬದಲು ಕೃಷ್ಣರಾಜಪುರಂ ರೈಲು ನಿಲ್ದಾಣ ದಿಂದ ಹೊರಡಲಿದೆ ಎಂದು ನೈಋುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.