ಗೃಹ ಸಚಿವ ಡಾ.ಪರಮೇಶ್ವರ್‌ ಅವರು ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಯಾಕೆ? ಏನಿದು? ಇಲ್ಲಿದೆ ಡಿಟೇಲ್ಸ್. 

ಬೆಳಗಾವಿ, [ಅ.23]: ಮಹಾರಾಷ್ಟ್ರ ಏಕೀಕರಣ ಸಮಿತಿಗೆ ನವೆಂಬರ್‌ 1ರಂದು ಕರಾಳ ದಿನ ಆಚರಿಸಲು ಅನುಮತಿ ನೀಡುವ ಬಗ್ಗೆ ಜಿಲ್ಲಾಡಳಿತವೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಪರಮೇಶ್ವರ್‌ ತಿಳಿಸಿದ್ದಾರೆ. 

Add Asianetnews Kannada as a Preferred SourcegooglePreferred

ಇದೇ ವೇಳೆ ಮಹಾರಾಷ್ಟ್ರ ಏಕೀಕರಣ ಸಮಿತಿ ಕರಾಳ ದಿನದ ಹೆಸರಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಿದರೆ, ಕಾನೂನು ಚೌಕ್ಕಟ್ಟಿನಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯೋತ್ಸವದಂದು ಎಂಇಎಸ್‌ ಕರಾಳ ದಿನ ಆಚರಿಸುವುದು ಹೊಸದಲ್ಲ. 

ಪ್ರತಿ ವರ್ಷ ಕರಾಳ ದಿನ ಆಚರಿಸುತ್ತಲೇ ಬಂದಿದ್ದು ಕರಾಳ ದಿನಕ್ಕೆ ಅನುಮತಿ ನೀಡುವ ಕುರಿತು ಜಿಲ್ಲಾಡಳಿತವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ 2016ರಲ್ಲಿ ಎಂಇಎಸ್‌ ವಿರುದ್ಧ ಸರ್ಕಾರ ವರದಿ ತರಿಸಿಕೊಂಡಿರುವುದನ್ನು ನಾನು ಪರಿಶೀಲಿಸುತ್ತೇನೆ. ಈ ಬಾರಿ ಕರಾಳ ದಿನಾಚರಣೆಗೆ ಎಂಇಎಸ್‌ಗೆ ಅನುಮತಿ ನೀಡದಂತೆ ಕನ್ನಡಪರ ಸಂಘಟನೆಗಳಿಂದ ವ್ಯಾಪಕ ಒತ್ತಡ ಬರುತ್ತಿದೆ ಎಂದರು.

ಕರಾಳ ದಿನ ಆಚರಿಸಲು ಎಂಇಎಸ್‌ಗೆ ಅನುಮತಿ ನೀಡಿದ್ದೇ ಆದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು ಭಾನುವಾರವಷ್ಟೇ ಎಚ್ಚರಿಕೆ ನೀಡಿದ್ದರು.