‘ಕೆ.ಸಿ. ವ್ಯಾಲಿ ನೀರಿನ ಗುಣಮಟ್ಟ ಅಧ್ಯಯನಕ್ಕೆ ಸಮಿತಿ ರಚಿಸಿ’
- ಬಯಲುಸೀಮೆ ಜಿಲ್ಲೆಗಳಿಗೆ ನೀರು ಹರಿಸುವ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆ
- ಸಂಸ್ಕರಿಸಿದ ತ್ಯಾಜ್ಯ ನೀರು ಬಳಕೆಗೆ ಯೋಗ್ಯವೇ? ಜಿಲ್ಲೆಯ ಜನರ ಪ್ರಶ್ನೆ
ಬೆಂಗಳೂರು: ಕೆ.ಸಿ. ವ್ಯಾಲಿ ನೀರಿನ ಗುಣಮಟ್ಟ ಅಧ್ಯಯನಕ್ಕೆ ಸಮಿತಿ ರಚಿಸುವಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ. ಕೆ.ಸಿ. ವ್ಯಾಲಿ ನೀರು ಜಿಲ್ಲೆಗಳಿಗೆ ಬರುವ ಮುನ್ನ ಅದು ಮಾರಕವಲ್ಲವೆಂದು ಸರ್ಕಾರ ಖಾತ್ರಿ ಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ .
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್ ಆಂಜನೇಯರೆಡ್ಡಿ, ರಾಸಾಯನಿಕ ಅಂಶಗಳಿಂದ ಕೂಡಿರುವ ಬೆಂಗಳೂರು ಹೆಬ್ಬಾಳ ಹಾಗೂ ನಾಗವಾರ ಕೆರೆ ಎನ್ನೆಚ್ ವಾಲಿ ಹಾಗೂ ಕೋರಮಂಗಲ ಮತ್ತು ಚಲ್ಲಘಟ್ಟ ಕೆರೆ [ಕೆ.ಸಿ. ವ್ಯಾಲಿ] ನೀರನ್ನು ಅವಿಭಜಿತ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸಲಾಗುತ್ತಿದೆ. ಆದರೆ ಈ ನೀರು ಬಳಕೆಗೆ ಯೋಗ್ಯ ಎನ್ನುವುದೇ ಸರ್ಕಾರ ದೃಢಪಡಿಸಿಲ್ಲ, ಎಂದು ಹೇಳಿದ್ದಾರೆ.
ಎನ್ನೆಚ್ ಹಾಗೂ ಕೆಸಿ ವ್ಯಾಲಿ ಯೋಜನೆಗಾಗಿಯೇ ಬೆಂಗಳೂರಿನಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ ಎನ್ನುವುದು ಸುಳ್ಳು . ಬೆಂಗಳೂರಿನ ಜನರಿಗೆ ಪೂರೈಸುತ್ತಿರುವ ನೀರು ಸಮರ್ಪಕವಾಗಿ ಶುದ್ಧೀಕರಣ ಮಾಡಲಾಗುತ್ತಿಲ್ಲ ಎಂಬ ಎಚ್ಚರಿಕೆ ಹಿನ್ನೆಲೆಯಲ್ಲಿ ಘಟಕ ಸರಿಪಡಿಸಲಾಗುತ್ತಿದೆ, ಎಂದು ಅವರು ಹೇಳಿದ್ದಾರೆ.
ಸಾಧಕ ಬಾಧಕ ತಿಳಿಯದೆ ಆತುರಾತುರವಾಗಿ ಅನುಷ್ಠಾನಗೊಂಡಿರುವ ಕೆ.ಸಿ. ವ್ಯಾಲಿ ನೀರಾವರಿ ಯೋಜನೆಯ ಕುರಿತು ಉಚ್ಚ ನ್ಯಾಯಾಲಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ, ಅವೈಜ್ಞಾನಿಕ ಯೋಜನೆಯನ್ನು ಜಾರಿಗೆ ತರುವ ಮೊದಲು ಸಾಧಕ ಬಾಧಕಗಳನ್ನು ಅರಿಯಬೇಕಾಗಿದೆ ಎಂದು ಆಂಜನೇಯರೆಡ್ಡಿ ಆಗ್ರಹಿಸಿದ್ದಾರೆ.