ಮನೆಮನೆಗೆ ಪಡಿತರ ವಿತರಣೆಗೆ ಸರಕಾರದ ಆದೇಶ
ಮನೆ ಮನೆಗೇ ಪಡಿತರ ವಿತರಣೆಯಾದರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ? ಇಂಥದ್ದೊಂದು ವ್ಯವಸ್ಥೆಗೆ ಸರಕಾರ ಮುಂದಾಗಿದೆ. ದಿಲ್ಲಿ ಸರ್ಕಾರದ ಈ ಕ್ರಮದಂತೆ ರಾಜ್ಯವೂ ಯೋಜನೆ ರೂಪಿಸಿಕೊಂಡರೆ ಅವ್ಯವಹಾರವನ್ನು ತಡೆಯಬಹುದು.
ನವದೆಹಲಿ: ಕೇಂದ್ರಾಡಳಿತ ಪ್ರದೇಶ ದಿಲ್ಲಿಗೆ ಯಾರು ಬಾಸ್ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕವೂ ಹಗ್ಗ ಜಗ್ಗಾಟ ಮುಂದುವರೆದಿದೆ. ಪಡಿತರ ವ್ಯವಸ್ಥೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ, ಉಪರಾಜ್ಯಪಾಲರು (ಎಲ್ಜಿ) ಹಾಗೂ ಅಧಿಕಾರಿಗಳು ಎತ್ತಿದ್ದ ಎಲ್ಲ ತಕರಾರುಗಳನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮನೆಮನೆಗೆ ಇನ್ನು ಪಡಿತರ ವಿತರಣೆ ಆಗಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಅಲ್ಲದೆ, ತಕ್ಷಣವೇ ಈ ಯೋಜನೆ ಜಾರಿಯಾಗಬೇಕು ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಇಲಾಖೆಗೆ ಸೂಚಿಸಿದ್ದಾರೆ. ಈ ಯೋಜನೆಗೆ ಈ ಮುನ್ನ ಉಪರಾಜ್ಯಪಾಲ ಅನಿಲ್ ಬೈಜಲ್ ಆಕ್ಷೇಪ ಎತ್ತಿದ್ದರು. ಆದರೆ ಪೊಲೀಸ್, ಭೂಮಿ ಮತ್ತು ಸಾರ್ವಜನಿಕ ಸುವ್ಯವಸ್ಥೆ ಹೊರತುಪಡಿಸಿದರೆ ಮಿಕ್ಕ ಯಾವ ಇಲಾಖೆ ಮೇಲೂ ಉಪರಾಜ್ಯಪಾಲರಿಗೆ ಅಧಿಕಾರ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಈಗ ಪಡಿತರ ವಿಷಯದಲ್ಲಿ ಅವರಿಗೆ ಅಧಿಕಾರ ಇಲ್ಲದಂತಾಗಿದೆ.