ಹಲವು ಅನುಮಾನಗಳಿಗೆ ಪರಮೇಶ್ವರ ಪರಿಹಾರ
ಕೆಲ ದಿನಗಳಿಂದ ಎದ್ದಿದ್ದ ಕೆಲ ಅನುಮಾನಗಳಿಗೆ ಡಿಸಿಎಂ ಡಾ. ಜಿ.ಪರಮೇಶ್ವರ ತೆರೆ ಎಳೆಯುವ ಯತ್ನ ಮಾಡಿದ್ದಾರೆ. ಸಮನ್ವಯ ಸಮಿತಿ ಸಭೆ, ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣ ಪ್ರವೇಶ..ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವ ಮುಖಂಡರ ಎಲ್ಲದರ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರು[ಜು.25] ಸಮನ್ವಯ ಸಮಿತಿ ಸಭೆಗೆ ಹೈ ಕಮಾಂಡ್ ಸೂಚನೆ ಅಗತ್ಯವಿಲ್ಲ. ನಮಗೆ ಯಾವಾಗ ಬೇಕೋ, ಆವಾಗ ಅಧ್ಯಕ್ಷರು ಸಭೆ ಕರೆಯುತ್ತಾರೆ. ನಾವು ತಿಂಗಳಿಗೊಮ್ಮೆ, ಎರಡು ತಿಂಗಳಿಗೊಮ್ಮೆ ಸಭೆ ಸೇರಬೇಕು ಅನ್ಕೊಂಡಿದ್ದೇವೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಚುಂಚನಗಿರಿಯಲ್ಲಿ ಮಾತನಾಡಿ, ನಮ್ಮಪಕ್ಷದಿಂದ ಮಾಜಿ ಸ್ಪೀಕರ್ ಕೋಳಿವಾಡ, ರಾಜಣ್ಣಗೆ ನೋಟಿಸ್ ನೀಡಲಾಗಿದೆ. ಅಧ್ಯಕ್ಷರು ನೋಟಿಸ್ ಕೊಟ್ಟಿದ್ದಾರೆ ಅದಕ್ಕೆ ಯಾವ ಉತ್ತರ ನೀಡುತ್ತಾರೆ ನೋಡೋಣ ಎಂದರು.
ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣ ಪ್ರವೇಶ ಮಾಡುವ ವಿಚಾರ ಅವರನ್ನೇ ಕೇಳಬೇಕು. ನಮ್ಮ ಪಕ್ಷದ ನಾಯಕರಾಗಿ ಜವಾಬ್ದಾರಿ ಹೊತ್ತಿರುವವರು. ಹಾಗಾಗಿ ವರ್ಕಿಂಗ್ ಕಮಿಟಿಗೆ ಅವರನ್ನ ತೆಗೆದುಕೊಂಡಿದ್ದಾರೆ. ಅಷ್ಟಕ್ಕೇ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆ ಎಂದು ಅರ್ಥ ಅಲ್ಲ ಎಂದರು.
ಮೂವರು ಕಾಂಗ್ರೆಸ್ ನಾಯಕರ ಬಿಜೆಪಿ ಸೇರ್ಪಡೆ ವಿಚಾರ ನನಗೆನು ಗೊತ್ತಿಲ್ಲ. ಮಂಡ್ಯದಲ್ಲಿ ನಡೆದಿದೆ ಎನ್ನಲಾದ ಲಾಖಪ್ ಡೆತ್ ತನಿಖೆ ನಡೆಯುತ್ತಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ.
ಲೋಕಸಭೆಗೆ ಟಿಕೆಟ್ ಹಂಚಿಕೆ ಇನ್ನೂ ಚರ್ಚೆ ಆಗಿಲ್ಲ. ಈಗಾಗಲೇ 6ನೇ ವೇತನ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ. ವರದಿ ಜಾರಿಗೆ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.