ಯುವಕನಿಂದ ಸೆಲ್ಫಿ ಆತ್ಮಹತ್ಯೆಗೆ ಯತ್ನ..!
ದಾವಣಗೆರೆಯ ಮಹಾರಾಜ ಸೋಪ್ ಇಂಡಸ್ಟ್ರೀ ವಾಚ್ಮನ್ ರಾಜೇಂದ್ರಸಿಂಗ್ ಎಂಬಾತ ಸೆಲ್ಫಿ ವಿಡಿಯೋ ಮಾಡಿಕೊಂಡು ವಿಷ ಸೇವಿದ್ದಾನೆ. ರಾಜೇಂದ್ರ ಸಿಂಗ್ ಮತ್ತು ಕಾವ್ಯ ಎಂಬ ಯುವತಿ ಪರಸ್ಪರ ಪ್ರೀತಿಸಿ ದೇವಸ್ಥಾನ ಒಂದರಲ್ಲಿ ಮದುವೆಯಾಗಿದ್ದರು.
ದಾವಣಗೆರೆ[ಜೂ.15]: ಪ್ರೀತಿಸಿ ಮದುವೆಯಾದ ಯುವತಿ ನನಗೆ ಸಿಗಲಿಲ್ಲ. ನಮ್ಮ ಜೋಡಿಯನ್ನು ಪೊಲೀಸರೇ ಬೇರ್ಪಡಿಸಿದರು ಎಂದು ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಮಹಾರಾಜ ಸೋಪ್ ಇಂಡಸ್ಟ್ರೀ ವಾಚ್ಮನ್ ರಾಜೇಂದ್ರಸಿಂಗ್ ಎಂಬಾತ ಸೆಲ್ಫಿ ವಿಡಿಯೋ ಮಾಡಿಕೊಂಡು ವಿಷ ಸೇವಿದ್ದಾನೆ. ರಾಜೇಂದ್ರ ಸಿಂಗ್ ಮತ್ತು ಕಾವ್ಯ ಎಂಬ ಯುವತಿ ಪರಸ್ಪರ ಪ್ರೀತಿಸಿ ದೇವಸ್ಥಾನ ಒಂದರಲ್ಲಿ ಮದುವೆಯಾಗಿದ್ದರು. ಇದಕ್ಕೆ ಯುವತಿ ಮನೆಯವರ ವಿರೋಧವಿದ್ದು, ಹದಡಿ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು. ಬಳಿಕ ಪ್ರೇಮಿಗಳನ್ನು ಪೊಲೀಸರು ಠಾಣೆಗೆ ಕರೆ ತಂದು ವಿಚಾರಿಸಿದ್ದಾರೆ. ಆಗ ತಂದೆ-ತಾಯಿಯ ಒತ್ತಡಕ್ಕೆ ಮಣಿದ ಯುವತಿ ಕಾವ್ಯ, ನಾನು ಬಲವಂತದಿಂದ ಅವನ ಜೊತೆ ಹೋಗಿದ್ದೆ. ಬರದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದ ಎಂದು ಹೇಳಿಕೆ ಕೊಟ್ಟು ತವರು ಮನೆಗೆ ಹೋಗಿದ್ದಾಳೆ.
ಇದರಿಂದ ತೀವ್ರ ಮನನೊಂದ ರಾಜೇಂದ್ರ ಸಿಂಗ್ ಸೆಲ್ಫಿ ವಿಡಿಯೋವೊಂದರಲ್ಲಿ ಪೊಲೀಸರೇ ನಮ್ಮಿಬ್ಬರನ್ನು ದೂರ ಮಾಡಿದ್ದಾರೆಂದು ಆರೋಪಿಸಿ ವಿಷ ಸೇವಿಸಿದ್ದಾನೆ. ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ದಾವಣಗೆರೆಯ ಚಿಟಗೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.