ವಿಧಾನಸೌಧದ ವಜ್ರ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ವಿವಾದಗಳ ನಡುವೆಯೇ ವಿಧಾನಸೌಧದ ವಜ್ರ ಮಹೋತ್ಸವದ ಭಾಗವಾಗಿ ಬೆಳಗ್ಗೆ 11ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಧಾನಮಂಡಲದ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಬೆಂಗಳೂರು(ಅ.24): ವಿಧಾನಸೌಧದ ವಜ್ರ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ವಿವಾದಗಳ ನಡುವೆಯೇ ವಿಧಾನಸೌಧದ ವಜ್ರ ಮಹೋತ್ಸವದ ಭಾಗವಾಗಿ ಬೆಳಗ್ಗೆ 11ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಧಾನಮಂಡಲದ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಬೆಳಗ್ಗೆ 11 ಗಂಟೆ ವೇಳೆಗೆ ರಾಜಭವನದಿಂದ ವಿಧಾನಸೌಧದವರೆಗೆ ವಿಶೇಷ ಮೆರವಣಿಗೆಯಲ್ಲಿ ರಾಷ್ಟ್ರಪತಿ ಕೋವಿಂದ್ ಆಗಮಿಸಲಿದ್ದಾರೆ. ರಾಜಭವನದಿಂದ ಆವರಣದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆವರೆಗೆ ರಾಷ್ಟ್ರಪತಿಗಳಿಗೆ ಅಶ್ವಾರೂಢ ಪಡೆ ಬೆಂಗಾವಲಾಗಿರಲಿದೆ. ರಾಷ್ಟ್ರಪತಿಗಳೊಂದಿಗೆ ಸ್ಪೀಕರ್ ಕೆ.ಬಿ. ಕೋಳಿವಾಡ, ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಎಲ್ಲ ಸಚಿವರು ಸಾಥ್ ನೀಡಲಿದ್ದಾರೆ. ಒಂದೆಡೆ ವಿಶೇಷ ಅಧಿವೇಶನಕ್ಕೆ ವಿಧಾನಸಭೆ ಸಭಾಂಗಣದಲ್ಲಿ ತಯಾರಿ ನಡೆದಿದ್ದರೆ, ಮತ್ತೊಂದೆಡೆ ವಜ್ರ ಮಹೋತ್ಸವಕ್ಕಾಗಿ ವಿಧಾನಸೌದದ ಕಟ್ಟಡ, ಬೃಹತ್ ಮೆಟ್ಟಿಲು, ಬ್ಯಾಂಕ್ವೆಟ್ ಹಾಲ್ ಗಳಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ವಜ್ರ ಮಹೋತ್ಸವ ಅಂಗವಾಗಿ ಮಧ್ಯಾಹ್ನ ಊಟದ ಬಳಿಕ 3 ಸಾಕ್ಷ್ಯ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಮಾಸ್ಟರ್ ಕಿಶನ್ ನಿರ್ದೇಶನದ 3ಡಿ ವರ್ಚುಯಲ್ ರಿಯಾಲಿಟಿ ವಿಡಿಯೋ ಪ್ರದರ್ಶನ ಇಂದು ಮಧ್ಯಾಹ್ನ 3 ಗಂಟೆಗೆ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದೆ.
