ಶಿವಮೊಗ್ಗ: ದಲಿತರಿಗೆ ದೇಗುಲ ಪ್ರವೇಶಕ್ಕೆ ಅಡ್ಡಿ
ದೇವಸ್ಥಾನದಲ್ಲಿ ಹಾರ ಹಾಕಲು ತೆರಳಿದ ದಲಿತರನ್ನು ಹೊರದಬ್ಬಿದ ಸವರ್ಣೀಯರು | ಘರ್ಷಣೆಯಲ್ಲಿ ಸೈಕಲ್ ಶಾಪ್’ಗೆ ಬೆಂಕಿ
ಶಿವಮೊಗ್ಗ: ದೇವಸ್ಥಾನದಲ್ಲಿರುವ ಆಂಜನೇಯ ಸ್ವಾಮಿಗೆ ಹಾರ ಹಾಕಲು ಅವಕಾಶ ನೀಡದ್ದಕ್ಕೆ ದಲಿತರು-ಸವರ್ಣೀಯರ ನಡುವೆ ಘರ್ಷಣೆ ನಡೆದು, ಸೈಕಲ್ ಶಾಪ್ ಸುಟ್ಟು ಹಾಕಿದ ಘಟನೆ ಶಿವಮೊಗ್ಗ ಜಿಲ್ಲೆ ಸಮೀಪದ ಹರಮಘಟ್ಟ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಪೊಲೀಸರು ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದು, ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಬಿಗುವಿನ ವಾತಾವರಣ ಮುಂದುವರಿದಿದೆ.
ಗುರುವಾರ ಭೂಮಿ ಹುಣ್ಣಿಮೆ ಹಬ್ಬದ ಹಿನ್ನೆಲೆಯಲ್ಲಿ ಮೆರವಣಿಗೆ ನಡೆಸಿದ ದಲಿತರು ದೇವಸ್ಥಾನಕ್ಕೆ ತೆರಳಿ ಹಾರ ಹಾಕಲು ಮುಂದಾಗಿದ್ದರು. ಇದಕ್ಕೆ ಅವಕಾಶ ನೀಡದ ಸವರ್ಣೀಯರು ದಲಿತರನ್ನು ದೇಗುಲದಿಂದ ಹೊರದಬ್ಬಿದ್ದರಿಂದ ಘರ್ಷಣೆ ಏರ್ಪಟ್ಟಿತು.
ಅಂಬೇಡ್ಕರ್ ಭಾವಚಿತ್ರವಿದ್ದ ಫ್ಲೆಕ್ಸ್ ಹರಿದುಹಾಕಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿತ್ತು.