ಡಿಕೆಶಿ ಐಟಿ ಅಧಿಕಾರಿಗಳಿಗೆ ನೀಡಿದ ಆಸ್ತಿ ಮಾಹಿತಿ ಕೇಳಿದ್ರೆ ಶಾಕ್!
ತಮ್ಮ ಮನೆ, ಕಚೇರಿ, ಉದ್ಯಮಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ನಂತರ ತಮ್ಮ ಆಸ್ತಿ ಪಾಸ್ತಿಗಳ ಬಗ್ಗೆ, ಉದ್ಯಮ ವ್ಯವಹಾರಗಳ ಬಗ್ಗೆ, ಕುಟುಂಬದ ಆಸ್ತಿ ಪಾಸ್ತಿ ಬಗ್ಗೆ ವಿವರಣೆಯನ್ನು ಡಿ.ಕೆ.ಶಿವಕುಮಾರ್ ಅವರು ತೆರಿಗೆ ಅಧಿಕಾರಿಗಳಿಗೆ ನೀಡಿದ್ದರು. ಇದರ ಕೆಲ ಮಾಹಿತಿಗಳು ಇಲ್ಲಿವೆ.
ಬೆಂಗಳೂರು (ಫೆ.16): ತಮ್ಮ ಮನೆ, ಕಚೇರಿ, ಉದ್ಯಮಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ ನಂತರ ತಮ್ಮ ಆಸ್ತಿ ಪಾಸ್ತಿಗಳ ಬಗ್ಗೆ, ಉದ್ಯಮ ವ್ಯವಹಾರಗಳ ಬಗ್ಗೆ, ಕುಟುಂಬದ ಆಸ್ತಿ ಪಾಸ್ತಿ ಬಗ್ಗೆ ವಿವರಣೆಯನ್ನು ಡಿ.ಕೆ.ಶಿವಕುಮಾರ್ ಅವರು ತೆರಿಗೆ ಅಧಿಕಾರಿಗಳಿಗೆ ನೀಡಿದ್ದರು. ಇದರ ಕೆಲ ಮಾಹಿತಿಗಳು ಇಲ್ಲಿವೆ.
ಮೈಸೂರು ರಾಜರ ಜತೆಗೂ ವ್ಯವಹಾರ?
ಶಿವಕುಮಾರ್ ಅವರ ಆಪ್ತ ಸಂಬಂಧಿಗಳು ಮೈಸೂರು ಮಹಾರಾಜರ ಕುಟುಂಬದ ಜೊತೆಗೂ ವ್ಯವಹಾರ ನಡೆಸಿರುವ ಸಾಧ್ಯತೆಯಿದೆ. ವ್ಯಾಜ್ಯದಲ್ಲಿರುವ ಮೈಸೂರು ಮಹಾರಾಜರ ಆಸ್ತಿಯೊಂದನ್ನು ಬಾಡಿಗೆಗೆ ಪಡೆದುಕೊಳ್ಳುವಂತೆ ತಮ್ಮ ಅಕ್ಕ ಅನಿತಾ, ಭಾವ ಶಶಿಕುಮಾರ್ ಹಾಗೂ ಅವರ ಮಗನಿಗೆ ಡಿಕೆಶಿ ಹೇಳಿದ್ದಾರೆ. ಮುಂದೆ ವ್ಯಾಜ್ಯ ಮುಗಿದ ಮೇಲೆ ಅದನ್ನು ಖರೀದಿಸಲು ಸುಲಭವಾಗುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಇದಕ್ಕಾಗಿ ಶಶಿಕುಮಾರ್ ಅವರಿಗೆ ಹಣಕಾಸಿನ ನೆರವು ನೀಡುವಂತೆ ತಮ್ಮ ಸ್ನೇಹಿತ ಸಚಿನ್ ನಾರಾಯಣನ್ಗೆ ಡಿಕೆಶಿ ಹೇಳಿದ್ದಾರೆ. ಮುಂದೆ ಈ ವ್ಯವಹಾರ ಏರ್ಪಟ್ಟಿತೇ ಇಲ್ಲವೇ ಎಂಬುದು ಸ್ಪಷ್ಟವಿಲ್ಲ.
ಪುತ್ರಿ ರಿಯಲ್ ಎಸ್ಟೇಟ್ ಉದ್ಯಮಿ
ಡಿಕೆಶಿ ಅವರ ಪುತ್ರಿ ಐಶ್ವರ್ಯಾ ಅವರು ಎಂಜಿನಿಯರಿಂಗ್ ಪದವಿ ಪಡೆದಿದ್ದು ಪ್ರತ್ಯೇಕ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದಾರೆ. 2016-17 ನೇ ಆರ್ಥಿಕ ವರ್ಷದಿಂದ ಆಕೆ ಆದಾಯತೆರಿಗೆ ರಿಟರ್ನ್ಸ್ ಅನ್ನೂ ಸಲ್ಲಿಸುತ್ತಿದ್ದಾರೆ. ರಿಯಲ್ ಎಸ್ಟೇಟ್ ಪ್ರಾಪರ್ಟಿಗಳಲ್ಲಿ ಕೆಲ ಷೇರುಗಳನ್ನು ಆಕೆ ಖರೀದಿಸಿದ್ದಾರೆ ಎಂಬ ಮಾಹಿತಿ ಇದೆ ಎನ್ನಲಾಗಿದೆ. ಇಷ್ಟೇ ಅಲ್ಲದೆ ಡಿಕೆಶಿ ಅವರ 2 ನೇ ಪುತ್ರಿ ಆಭರಣ 11 ನೇ ತರಗತಿ ಓದುತ್ತಿದ್ದು, ಪುತ್ರ ಆಕಾಶ್ 9 ನೇ ತರಗತಿ ಓದುತ್ತಿದ್ದಾನೆ. ಇವರಿಬ್ಬರು ಅಪ್ರಾಪ್ತರಾಗಿದ್ದು ಇವರಿಗೆ ಯಾವುದೇ ಆದಾಯದ ಮೂಲ ಇಲ್ಲ ಎಂದು ವಿವರಿಸಲಾಗಿದೆ. ಪತ್ನಿ ಉಷಾ ಅವರೂ ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ.
ಪತ್ನಿ ಆಭರಣ ಅತ್ತಿಗೆ ಬಳಿ
ಷಡ್ಕ ರಂಗನಾಥ್ ಜತೆ ನನಗೆ ವ್ಯವಹಾರವಿಲ್ಲ, ಆದರೆ ಕಷ್ಟಕಾಲಕ್ಕೆ ಒಂದಷ್ಟು ಹಣಕಾಸಿನ ಸಹಾಯ ಮಾಡಿದ್ದೆ ಎಂದು ಡಿಕೆಶಿ ಹೇಳಿದ್ದಾರೆ. ಅವರ ಪತ್ನಿ ಸುಮಾ ರಂಗನಾಥ್ ಬಳಿ ನನ್ನ ಪತ್ನಿಯ ಒಂದಷ್ಟು ಆಭರಣಗಳಿವೆ. ಯಾವುದೋ ಕೌಟುಂಬಿಕ ಸಮಾರಂಭದಲ್ಲಿ ಧರಿಸುವುದಕ್ಕೆಂದು ಆಭರಣ ತೆಗೆದುಕೊಂಡು ಹೋಗಿದ್ದರು ಎಂದು ಐಟಿಗೆ ಹೇಳಿದ್ದಾರೆ. ಡಿಕೆಶಿ ಹೆಸರಲ್ಲಿ ಬ್ಯಾಂಕ್ ಲಾಕರ್ ಇಲ್ಲ
ಕೋಟ್ಯಂತರ ವ್ಯವಹಾರ ನಡೆಸಿದರೂ ಡಿಕೆಶಿ ತಮ್ಮ ಹೆಸರಲ್ಲಾಗಲಿ ಅಥವಾ ಕುಟುಂಬ ಸದಸ್ಯರ ಹೆಸರಲ್ಲಾಗಲಿ ಬ್ಯಾಂಕ್ ಲಾಕರ್ಗಳನ್ನು ಹೊಂದಿಲ್ಲ.
ಬೇರೆ ಕಡೆ ಹಣ ಇಟ್ಟಿದ್ದೇನಾ? ಗೊತ್ತಿಲ್ಲ
ನಿಮಗೆ ಅಥವಾ ನಿಮ್ಮ ಕುಟುಂಬ ಸದಸ್ಯರಿಗೆ ಸೇರಿದ ನಗದು ಅಥವಾ ಚಿನ್ನಾಭರಣವನ್ನು ಬೇರೆ ಎಲ್ಲಾದರೂ ಇಟ್ಟಿದ್ದೀರಾ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಪ್ರಶ್ನಿಸಿದಾಗ, ‘ನನಗೆ ನೆನಪಿಲ್ಲ’ ಎಂದು ಡಿಕೆಶಿ ಉತ್ತರಿಸಿದ್ದಾರೆ. ಆ ಬಗ್ಗೆ ಪರಿಶೀಲಿಸಿ, ಗಮನಕ್ಕೆ ತರುತ್ತೇನೆ ಎಂದೂ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ರಿಯಾಲ್ಟಿ, ಶಿಕ್ಷಣ, ಕ್ವಾರಿ ಬಿಸಿನೆಸ್
ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮತ್ತು ಕ್ವಾರಿ ಉದ್ಯಮ ನಡೆಸುತ್ತಿದ್ದು ಇವುಗಳಿಂದ ಆದಾಯ ಇದೆ. ಕೆಲ ಜಂಟಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದು ಇವುಗಳಿಂದ ಆದಾಯ ಬರುವುದಿದೆ ಎಂದು ಅವರು ಐಟಿ ಅಧಿಕಾರಿಗಳಿಗೆ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ. ಇಷ್ಟೇ ಅಲ್ಲದೆ ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಮತ್ತು ಅಪೊಲೋ ಎಜುಕೇಶನ್ ಟ್ರಸ್ಟ್’ಗಳಿಗೆ ಡಿಕೆಶಿ ಅಧ್ಯಕ್ಷರಾಗಿದ್ದಾರೆ. ಈ ಟ್ರಸ್ಟ್ಗಳು
ಎಂಜಿನಿಯರಿಂಗ್ ಕಾಲೇಜು, ನರ್ಸಿಂಗ್ ಕಾಲೇಜು, ಎಂಬಿಎ ಕಾಲೇಜುಗಳನ್ನು ನಡೆಸುತ್ತಿದೆ.
ಬಿಡಿಹಾಳೆಗಳು ಜನ ಕೊಟ್ಟಿದ್ದ ದೂರು
ಈಗಲ್ಟನ್ ರೆಸಾರ್ಟ್ನ 216 ನೇ ಸಂಖ್ಯೆಯ ಕೊಠಡಿಯಲ್ಲಿ ವಶಪಡಿಸಿಕೊಂಡ ಬಿಡಿಹಾಳೆಗಳು ನನಗೆ ಜನರು ನೀಡಿದಂಥವು. ಸಮಸ್ಯೆಗಳ ಸಂಬಂಧ ನೆರವು ಕೋರಿ ಅದನ್ನು ನೀಡಿದ್ದರು. ಅದರ ಮೇಲೆ
ಕೆಲ ಟಿಪ್ಪಣಿ/ಲೆಕ್ಕಾಚಾರ ಇವೆ. ಆ ಬಗ್ಗೆ ಆಲೋಚನೆ ಮಾಡಿ ವಿವರಣೆ ನೀಡಲು ನನಗೆ ಸಮಯಾವಕಾಶ ಬೇಕು. ಈಗಲ್ಟನ್ ರೆಸಾರ್ಟ್ನ 216 ನೇ ಕೋಣೆಯಲ್ಲಿ ಈ ಬಿಡಿ ಹಾಳೆ ವಶಪಡಿಸಿಕೊಳ್ಳಲಾಗಿತ್ತು. ಆ ಹಾಳೆಗಳು ನನ್ನ ಬ್ಯಾಗ್ನಲ್ಲಿ ಇದ್ದವು ಎಂದು ಡಿಕೆಶಿ ಮಾಹಿತಿ ಕೊಟ್ಟಿದ್ದಾರೆ ಎನ್ನಲಾಗಿದೆ. ವಶಪಡಿಸಿಕೊಳ್ಳಲಾದ ಚೀಟಿಗಳನ್ನು ಅಧಿಕಾರಿಗಳು ಪ್ರದರ್ಶಿಸಿ ಉತ್ತರ ಬಯಸಿದಾಗ ಡಿಕೆಶಿ ಈ ರೀತಿ ಪ್ರಕ್ರಿಯೆ ನೀಡಿದ್ದಾರೆ.
ಚೀಟಿ ಪತ್ನಿ, ಮಗಳ ಆಸ್ತಿ ಕುರಿತಾದದ್ದು
ಬೆಂಗಳೂರಿನ ಸದಾಶಿವನಗರದಲ್ಲಿರುವ ಮನೆಯಲ್ಲಿ ವಶಪಡಿಸಿಕೊಳ್ಳಲಾದ ಕೆಲ ಬಿಡಿ ಹಾಳೆಗಳು ನನ್ನ ಇಲಾಖೆಗೆ ಸಂಬಂಧಿಸಿದ್ದಾಗಿದ್ದವು. ಆಸ್ತಿ ಖರೀದಿ ಸಂಬಂಧ ನನ್ನ ಪುತ್ರಿ ಮಾಡಿಕೊಂಡಿದ್ದ ಒಪ್ಪಂದ
ಹಾಗೂ ನನ್ನ ತಾಯಿ ನನ್ನ ಪತ್ನಿಗೆ ಗಿಫ್ಟ್ ಡೀಡ್ನ ಕರಡು ಇತ್ತು. ನ್ಯಾಷನಲ್ ಎಜುಕೇಷನ್ ಫೌಂಡೇಶನ್ ನಿರ್ದೇಶಕ ಮಂಡಳಿಗೆ ಸಂಬಂಧಿಸಿದ ದಾಖಲೆಯೂ ಅದರಲ್ಲಿತ್ತು. ನನ್ನ ಹಾಗೂ ನನ್ನ ಸಂಬಂಧಿಕರ (ಪುಟ
೫ರಿಂದ ೧೩) ಆಸ್ತಿಗಳ ವಿವರ ಇತ್ತು. ಅದನ್ನು ಬಿಟ್ಟು ಉಳಿದ ಕಾಗದಗಳು ನನಗೆ ಸಂಬಂಧಿಸಿದ್ದಾಗಿರಲಿಲ್ಲ ಎಂದು ಶಿವಕುಮಾರ್ ಉತ್ತರಿಸಿದ್ದಾರೆ ಎನ್ನಲಾಗಿದೆ.
ಹರಿದ ದಾಖಲೆ ತನ್ನದು ಎಂದ ಉದ್ಯಮಿ
ಆದಾಯ ತೆರಿಗೆ ದಾಳಿಯ ಸಂದರ್ಭದಲ್ಲಿ ಆರೋಪಿಯು (ಶಿವಕುಮಾರ) ಕೆಲವು ದಾಖಲೆಗಳನ್ನು ಹರಿದು ಹಾಕಲು 2.8. 2007 ರಂದು ಯತ್ನಿಸುತ್ತಾರೆ. ಈ ದಾಖಲೆಗಳು ತಮಗೇ ಸೇರಿವೆ ಎಂದು
ಉದ್ಯಮಿಯೊಬ್ಬರು ವಿಚಾರಣೆ ವೇಳೆ ಒಪ್ಪಿದ್ದಾರೆ. ಆದರೆ ಇದನ್ನು ಡಿಕೆಶಿ ನಿರಾಕರಿಸಿದ್ದಾರೆ. ತೆರಿಗೆ ವಂಚನೆ ಮಾಡಲೆಂದು ಸಾಲ 5 ಕೋಟಿ ರು. ಮೊತ್ತದ ಸಾಲವನ್ನು ಶಿವಕುಮಾರ್ ತಮಗೆ ನೀಡಿದ್ದರು ಎಂದು ಉದ್ಯಮಿ ವಿಚಾರಣೆ ವೇಳೆ ಒಪ್ಪಿದ್ದಾರೆ. ಡಿಕೆಶಿ ಜತೆಗಿನ ಬಾಂಧವ್ಯ ಒಪ್ಪಿದ್ದಾರೆ. ಉದ್ಯಮಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಉದ್ದೇಶಪೂರ್ವಕವಾಗಿ ದಾಖಲೆ ನಾಶ
ಡಿಕೆಶಿ ಇಂಧನ ಸಚಿವ. ಅವರು ಉದ್ದೇಶಪೂರ್ವಕವಾಗಿ ಕಚ್ಚಾ ಕಾಗದ ಹರಿದು ಹಾಕಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ. ಅವರನ್ನೇಕೆ ವಿಚಾರಣೆ ಮಾಡಬಾರದು ಎಂದು ಐಟಿ ಇಲಾಖೆ ಕೋರ್ಟ್ ಮೊರೆ ಹೋಗಿದೆ.
ನನ್ನನ್ನು ಅವರು ಏನ್ ಬೇಕಾದ್ರೂ ಮಾಡಲಿ. ಕೇಂದ್ರ ಸರ್ಕಾರ ತೋಡಿರುವ ಖೆಡ್ಡಾಕ್ಕಾದ್ರೂ ಹಾಕಲಿ, ಭೂಮಿ ಒಳಗಾದ್ರೂ ಹಾಕಲಿ, ಇಲ್ಲವೇ ಭೂಮಿ ಒಳಗೆ ಹೂತು ಬಿಡಲಿ. ಅದರ ಬಗ್ಗೆ ನಾನು ಚಿಂತೆ ಮಾಡುವುದಿಲ್ಲ. ಯಾರ್ ಯಾರಿಗೆ ಏನ್ ಖುಷಿಯೋ ಹಾಗೇ ಮಾಡಿಕೊಳ್ಳಲಿ.