ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ಸಿದ್ಧ: ಸಿ.ಟಿ.ರವಿ ಸವಾಲು
ಪಕ್ಷ ಬಯಸಿದರೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಸ್ಪರ್ಧಿಸಲು ನಾನು ಸಿದ್ಧ. ಆದರೆ ಸಿದ್ದರಾಮಯ್ಯ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂದು ಮಾಜಿ ಸಚಿವ ಸಿ.ಟಿ. ರವಿ ಸವಾಲು ಹಾಕಿದ್ದಾರೆ.
ಮೈಸೂರು : ಪಕ್ಷ ಬಯಸಿದರೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಸ್ಪರ್ಧಿಸಲು ನಾನು ಸಿದ್ಧ. ಆದರೆ ಸಿದ್ದರಾಮಯ್ಯ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂದು ಮಾಜಿ ಸಚಿವ ಸಿ.ಟಿ. ರವಿ ಸವಾಲು ಹಾಕಿದ್ದಾರೆ.
ಸೋಮವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಲೂಟಿ ರವಿ ಎಂದು ಆರೋಪಿಸಿದ್ದಾರೆ. ಮಾ.26ರೊಳಗೆ ಚಾಮುಂಡೇಶ್ವರಿ ಮೇಲೆ ನಾನು ಆಣೆ ಮಾಡುತ್ತೇನೆ ಎಂದು ಹೇಳಿದ್ದೆ. ಅದರಂತೆ ಈಗ ಬಂದು ಆಣೆ ಮಾಡಿದ್ದೇನೆ ಎಂದರು.
ಸಿದ್ದರಾಮಯ್ಯಅವರ ಆರೋಪವನ್ನು ನಾನು ಇಷ್ಟಕ್ಕೆ ಬಿಡುವುದಿಲ್ಲ. ಅವರದೇ ಸರ್ಕಾರ ರಾಜ್ಯದಲ್ಲಿದೆ. ಎಸಿಬಿ ಇದೆ. ಅದರ ಮೂಲಕ ತನಿಖೆ ಮಾಡಿಸಬಹುದಿತ್ತು. ಚುನಾವಣಾ ಆಯೋಗಕ್ಕೆ ನಾನು ಸಲ್ಲಿಸಿದ ಪ್ರಮಾಣ ಪತ್ರಕ್ಕಿಂತ ಹೆಚ್ಚು ಆಸ್ತಿ ಇದ್ದರೆ ತನಿಖೆ ಮಾಡಿಸಲಿ.
ನಾನು ಚಾಮುಂಡೇಶ್ವರಿಯಲ್ಲಿ ರಾಜ್ಯದ ಈ ಭ್ರಷ್ಟಾಚಾರ ಸರ್ಕಾರ ತೊಲಗಲಿ ಎಂದು ಕೇಳಿಕೊಂಡಿದ್ದೇನೆ. ನಾನು ಇನ್ನೂ ಮೂರು ದಿನ ಮೈಸೂರಿನಲ್ಲಿಯೇ ಇರುತ್ತೇನೆ. ಸಿದ್ದರಾಮಯ್ಯ ಅವರು ನನ್ನ ಸವಾಲನ್ನು ಸ್ವೀಕರಿಸಲಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಪ್ರತಾಪ್ಸಿಂಹ, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಜಿಲ್ಲಾಧ್ಯಕ್ಷ ಎಂ. ಶಿವಣ್ಣ, ಮುಖಂಡ ನಾಗೇಂದ್ರ ಇದ್ದರು.