ಸಂವಿಧಾನ ಇಲ್ಲದಿದ್ದರೆ ಹೆಗಡೆ ಸಚಿವನಾಗುತ್ತಿರಲಿಲ್ಲ – ಪುರೋಹಿತನಾಗಿರುತ್ತಿದ್ದರು : ದ್ವಾರಕನಾಥ್
ಎಂದಾದರೂ ಸಂವಿಧಾನ ಓದಿದ್ದಾನಾ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ವಾಗ್ದಾಳಿ ನಡೆಸಿದ್ದಾರೆ.
ಚಾಮರಾಜನಗರ (ಡಿ.30): ಚಾಮರಾಜನಗರದಲ್ಲಿ ಬಹುಜನ ವಿದ್ಯಾರ್ಥಿ ಸಂಘದ ವತಿಯಿಂದ ಕೋರೆಗಾಂವ್ ವಿಜಯೋತ್ಸವ -200 ವರ್ಷಗಳು...ಮುಂದೇನು..? ಕುರಿತು ವಿಚಾರ ಸಂಕಿರಣ ನಡೆದಿದ್ದು, ಈ ವೇಳೆ ಮಾತನಾಡಿದ ದ್ವಾರಕನಾಥ್ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಚಾರ ಸಂಕಿರಣ ಉದ್ಘಾಟಿಸಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಸಂವಿಧಾನದ ಬದಲಾವಣೆ ಬಗ್ಗೆ ಕ್ರಿಮಿಕೀಟಗಳು ಮಾತನಾಡುತ್ತಿವೆ. ಕೇಂದ್ರ ಸಚಿವ ಅನಂತಕುಮಾರ್ ಹೆಗ್ಗಡೆ ಓರ್ವ ಮೂರ್ಖ, ಐದಾರು ಬಾರಿ ಸಂಸದನಾಗಿದ್ದಾನೆ ಆತನಿಗೆ ಸಂವಿಧಾನ ಗೊತ್ತ .? ಎಂದಾದರೂ ಸಂವಿಧಾನ ಓದಿದ್ದಾನಾ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನ ಪುಸ್ತಕ ಮುಟ್ಟುವುದಕ್ಕು ಆತ ಅಸ್ಪೃಶ್ಯತೆ ಆಚರಿಸುತ್ತಿದ್ದಾನೆ. ಸಂವಿಧಾನ ಇರದಿದ್ದರೆ ಆತ ಹೇಗೆ ಕೇಂದ್ರ ಸಚಿವ ಆಗುತ್ತಿದ್ದ, ಸಂವಿಧಾನದಿಂದಲೇ ಕೇಂದ್ರ ಸಚಿವನಾಗಿದ್ದಾನೆ. ಇಲ್ಲದಿದ್ದರೆ ಕಾರವಾರದಲ್ಲಿ ಪೌರೋಹಿತ್ಯ ಮಾಡಿಕೊಂಡಿರುತ್ತಿದ್ದ. ಅನಂತಕುಮಾರ್ ಹೆಗ್ಗಡೆ ಅಲ್ಲ, ಆತ ಹೆಗ್ಗಣ. ಆತನ ಹೆಸರು ಹೇಳುವುದಕ್ಕೆ ನಾಚಿಕೆಯಾಗುತ್ತದೆ. ಅಂಬೇಡ್ಕರ್ ಸಂವಿಧಾನ ಬರೆದಿದ್ದು ಕೇವಲ ಎಸ್ ಸಿ, ಎಸ್ ಟಿ ಗೆ ಅಲ್ಲ, ಹಿಂದುಳಿದವರಿಗೂ ಸಂವಿಧಾನ ಬರೆದಿದ್ದಾರೆ. ಆದರೆ ಹಿಂದುಳಿದವರು ಆತ್ಮ ವಂಚನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಡಾ.ಸಿ.ಎಸ್.ದ್ವಾರಕನಾಥ್ ಹೇಳಿದ್ದಾರೆ.