ಲೂಟಿ ಮುಚ್ಚಿಲು ಕೋಟಿ ಲಂಚ!: ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಲಕ್ಷ್ಮಣ ಸವದಿಗೆ 1.5 ಕೋಟಿ ?
ವಿಶ್ವಭಾರತೀ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಯ ಅಕ್ರಮಗಳ ಒಂದೆರಡಲ್ಲ. ನೂರಾರು ಅಮಾಯಕ ನಾಗರೀಕರ ದುಡ್ಡು ಪಡೆದು ಟೋಪಿ ಹಾಕಿದ ಕೀರ್ತಿ ಸೊಸೈಟಿಯ ಕೆಲ ಸದಸ್ಯರಿಗೆ ಸೇರುತ್ತೆ. ಆದ್ರೆ, ತಮ್ಮ ಅಕ್ರಮಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರದ ಅಂದಿನ ಸಚಿವರು, ಕಾರ್ಪೋರೇಟರ್ ಸೇರಿದಂತೆ ಹಲವು ಮಂದಿ ಕೋಟಿ, ಕೋಟಿ ದುಡ್ಡು ಸುರಿದಿದ್ದಾರೆ ಗೊತ್ತಾ..? ಈ ವಿವರಗಳನ್ನು ನೋಡಿದ್ರೆ ನೀವು ಬೆಚ್ಚಿಬೀಳ್ತೀರಾ ?
ಬೆಂಗಳೂರು(ಜು.31): ವಿಶ್ವಭಾರತೀ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿಯ ಅಕ್ರಮಗಳ ಒಂದೆರಡಲ್ಲ. ನೂರಾರು ಅಮಾಯಕ ನಾಗರೀಕರ ದುಡ್ಡು ಪಡೆದು ಟೋಪಿ ಹಾಕಿದ ಕೀರ್ತಿ ಸೊಸೈಟಿಯ ಕೆಲ ಸದಸ್ಯರಿಗೆ ಸೇರುತ್ತೆ. ಆದ್ರೆ, ತಮ್ಮ ಅಕ್ರಮಗಳನ್ನು ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರದ ಅಂದಿನ ಸಚಿವರು, ಕಾರ್ಪೋರೇಟರ್ ಸೇರಿದಂತೆ ಹಲವು ಮಂದಿ ಕೋಟಿ, ಕೋಟಿ ದುಡ್ಡು ಸುರಿದಿದ್ದಾರೆ ಗೊತ್ತಾ..? ಈ ವಿವರಗಳನ್ನು ನೋಡಿದ್ರೆ ನೀವು ಬೆಚ್ಚಿಬೀಳ್ತೀರಾ ?
ವಿಶ್ವಭಾರತೀ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಬೆಂಗಳೂರಿನ ಗಿರಿನಗರ ಭಾಗದಲ್ಲಿ ಹತ್ತಾರು ಎಕರೆ ಜಮೀನಿನಲ್ಲಿ ಲೇಔಟ್ಗಳನ್ನ ನಿರ್ಮಾಣ ಮಾಡಿತ್ತು. ಈ ವೇಳೆ ಬಿಡಿಎ ಜಾಗವನ್ನೂ ಅಕ್ರಮವಾಗಿ ಒತ್ತುವರಿ ಮಾಡುವ ಮೂಲಕ ಸುದ್ದಿಯಾಗಿತ್ತು. ಜತೆಗೆ ಸೈಟ್ನ ಮೂಲ ಬೆಲೆಗಿಂತ ಹೆಚ್ಚಿನ ಹಣವನ್ನು ಗ್ರಾಹಕರಿಂದ ಪಡೆದು ನಂತರ ಸೈಟನ್ನೂ ಕೊಡದೇ ಹಣವನ್ನೂ ಹಿಂದಿರುಗಿಸದೇ ಕೋಟಿ ಕೋಟಿ ಪಂಗನಾಮ ಹಾಕಿತ್ತು. ಸೊಸೈಟಿಯ ಸದಸ್ಯರಿಂದ ಮೋಸಹೋದ ಜನ ಲೋಕಾಯುಕ್ತ ಸಂಸ್ಥೆಗೆ ದೂರನ್ನೂ ನೀಡಿದ್ರು. ಆದ್ರೆ, ಮಾಡಿರುವ ಅಕ್ರಮಗಳನ್ನು ಮುಚ್ಚಿಕೊಳ್ಳಲು ಸೊಸೈಟಿ ಸದಸ್ಯರೇ, ಪ್ರಭಾವಿಗಳಿಗೆ ಕೋಟಿ ಕೋಟಿ ರೂಪದಲ್ಲಿ ಲಂಚ ನೀಡಿದ್ದಾರೆ. ಈ ದಾಖಲೆಗಳು ಸುವರ್ಣ ನ್ಯೂಸ್ಗೆ ಸಿಕ್ಕಿದೆ.
ತನಿಖೆಯಿಂದ ತಪ್ಪಿಸಿಕೊಳ್ಳಲು ಕೋಟಿ ಕೋಟಿ ಲಂಚ
ಅಮಾಯಕರ ದುಡ್ಡು ನುಂಗಿ ನೀರು ಕುಡಿದಿದ್ದ ಸೊಸೈಟಿಯ ಸದಸ್ಯರು, ಪ್ರಕರಣ ಬೆಳಕಿಗೆ ಬಂದಾಗ ಇಕ್ಕಟ್ಟಿನಲ್ಲಿ ಸಿಲುಕಿದ್ರು. ತನಿಖೆಯಿಂದ ತಮ್ಮ ಬಂಡವಾಳ ಬಯಲಾಗುವ ಭೀತಿಯಿಂದ, ಮಂತ್ರಿಗಳಿಗೆ, ಕಾರ್ಪೋರೇಟರ್ಗಳಿಗೆ ದುಡ್ಡಿನ ಸುರಿಮಳೆಗೈದ್ರು.. ಸುವರ್ಣ ನ್ಯೂಸ್ಗೆ ಸಿಕ್ಕಿರುವ ಆರ್ಟಿಐ ಮೂಲಕ ಪಡೆಯಲಾದ ಧೃಢೀಕೃತ ಪ್ರತಿಯಲ್ಲಿರುವ ಮಾಹಿತಿಯಂತೆ, ಅಂದಿನ ಬಿಜೆಪಿ ಸಹಕಾರ ಸಚಿವರಾಗಿದ್ದ ಲಕ್ಷ್ಮಣ್ ಸವದಿಯವರಿಗೆ 1.5 ಕೋಟಿ ರೂಪಾಯಿ ಹಣ ಸಂದಾಯವಾಗಿದೆ.
ಅಂದಿನ ಸಹಕಾರ ಸಚಿವ ಲಕ್ಷ್ಮಣ್ ಸವದಿಯವರಿಗೆ 1.5 ಕೋಟಿ ರೂಪಾಯಿಗಳನ್ನು ಸೊಸೈಟಿ ಕೊಟ್ಟಿದ್ಯಾಕೆ? ಸೊಸೈಟಿ ಮತ್ತು ಸಚಿವರ ನಡುವೆ ಹಣದ ವ್ಯವಹಾರ ನಡೆದಿದ್ದಾದರೂ ಯಾಕೆ ಅನ್ನೋದನ್ನು ಎಲ್ಲರೂ ಊಹಿಸಬಹುದು. ಅಷ್ಟೇ ಅಲ್ಲ, ವಿಶ್ವಭಾರತೀ ಕೋ-ಆಪರೇಟಿವ್ ಸೊಸೈಟಿ ನಿರ್ಮಿಸಿರುವ ಲೇಔಟ್ ಕತ್ರಿಗುಪ್ಪೆ ವಾರ್ಡ್ನಲ್ಲಿದೆ. ಈ ವಾರ್ಡ್ನ ಬಿಜೆಪಿ ಕಾರ್ಪೊರೇಟರ್ ಸಂಗಾತಿ ವೆಂಕಟೇಶ್ ಅವರಿಗೂ ನಲವತ್ತು ಲಕ್ಷ ರೂಪಾಯಿ ನೀಡುವ ಬಗ್ಗೆ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಸುವರ್ಣ ನ್ಯೂಸ್ಗೆ ಸಿಕ್ಕಿರೋ, ಸೊಸೈಟಿಯ ಆಡಳಿತ ಮಂಡಳಿ ನಿರ್ದೇಶಕರೇ ಸಹಿ ಮತ್ತು ಸೀಲ್ ಸಮೇತ ಲಿಖಿತರೂಪದ ದಾಖಲೆ ಅಂಗೈ ಹುಣ್ಣಿಗೆ ಕನ್ನಡಿ ಹಿಡಿದಂತಿದೆ..
ಐಜಿ ಸತ್ಯನಾರಾಯಣ್ 50 ಲಕ್ಷ ಸಂದಾಯ
ಮತ್ತೊಂದು ಗಮನಾರ್ಹ ವಿಷಯ ಅಂದ್ರೆ, ಐಜಿ ಸತ್ಯನಾರಾಯಣ ಅವರಿಗೆ 50 ಲಕ್ಷ ಸಂದಾಯವಾಗಿದೆ ಅಂತ ದಾಖಲೆಯಲ್ಲಿ ನಮೂದಿಸಲಾಗಿದೆ. ಅಂದಿನ ಲೋಕಾಯುಕ್ತ ಐಜಿಪಿಯಾಗಿದ್ದ ಸತ್ಯನಾರಾಯಣ ರಾವ್ ಅವರಿಗೂ ಈ ಕೇಸ್ಗೂ ಏನ್ ಸಂಬಂಧ ಅನ್ನೋದು ಊಹಿಸೋದು ಕಷ್ಟವಲ್ಲ.
ಈ ರೀತಿಯಾಗಿ ಹಲವು ವ್ಯಕ್ತಿಗಳಿಗೆ ಹಣ ಕೊಟ್ಟಿರುವ ಬಗ್ಗೆ ಖುದ್ದು ಸೊಸೈಟಿಯ ನಿರ್ದೇಶಕರೇ ಬರೆದಿರುವ ದಾಖಲೆಗಳು ಈಗ ಬಟಾಬಯಲಾಗಿದೆ. ಆದ್ರೆ, ಈ ಹಣ ಸಂದಾಯ ಮಾಡಿದ್ದು ಯಾಕೆ ? ವಿಶ್ವಭಾರತಿ ಕೋ- ಆಪರೇಟಿವ್ ಸೊಸೈಟಿ ಮೇಲೆ ಸರ್ಕಾರದ ಪ್ರಭಾವ ಏನು ಅನ್ನೋದರ ಬಗ್ಗೆ ತನಿಖೆಯಾಗಬೇಕಿದೆ..