ಮರಳು ತರಲಿಲ್ಲವೆಂದು ಚಾಲಕನಿಗೆ ಥಳಿಸಿದನಾ ಪೇದೆ?
ತುಮಕೂರು(ಅ.03): ತುಮಕೂರಿನ ಶಿರಾ ಗೇಟಿನಲ್ಲಿರುವ ಎಸ್ ಸಿ, ಎಸ್ ಟಿ ಘಟಕದಲ್ಲಿ ಸೇವೆ ಸಲ್ಲಿಸುತಿದ್ದ ಪೊಲೀಸ್ ಪೇದೆ ನಾರಾಯಣ ಮೂರ್ತಿ ವಿರುದ್ಧ ಟ್ರಾಕ್ಟರ್ ಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಯಲ್ಲಾಪುರದ ನಿವಾಸಿ ಟ್ರಾಕ್ಟರ್ ಚಾಲಕ ನಾಗರಾಜು ಎಂಬವರು ಆಪಾದನೆ ಮಾಡಿದ್ದಾರೆ.
ಪೊಲೀಸ್ ಪೇದೆ ನಾರಾಯಣ ಮೂರ್ತಿ ಮನೆ ಕಟ್ಟುತ್ತಿದ್ದು ಮರಳು ತರುವಂತೆ ನಾಗರಾಜುವಿಗೆ ಆರ್ಡರ್ ಮಾಡಿದ್ದನಂತೆ. ಪೊಲೀಸರು ಅಡ್ಡಿಪಡಿಸಿದ್ದರೆ ತನ್ನ ಹೆಸರು ಹೇಳು ಅಂತ ನಾರಾಯಣ ಮೂರ್ತಿ ನಾಗರಾಜುವಿಗೆ ತಾಕೀತು ಮಾಡಿ 5 ಸಾವಿರ ರೂ ಮುಂಗಡವಾಗಿ ನೀಡಿದ್ದರಂತೆ. ಆದರೆ ಕೊರಟಗೆರೆಯಲ್ಲಿ ಪೊಲೀಸರು ನಾಗರಾಜುವಿನ ಮರಳು ಟ್ರಾಕ್ಟರ್ ಹಿಡಿದು ಜಪ್ತಿ ಮಾಡಿ ದಂಡ ಹಾಕಿದ್ದರು. ಆಗ ಪೇದೆ ನಾಗರಾಜುವಿಗೆ ಪೋನ್ ಮಾಡಿದ್ದರೆ ಟ್ರಾಕ್ಟರ್ ಬಿಡಿಸಿ ಕೊಡಲು ತನ್ನಿಂದ ಸಾಧ್ಯವಿಲ್ಲ ಅಂತ ಕೈ ಕೊಟ್ಟಿದ್ದಾನೆ.
ಇದರಿಂದ ನಾಗರಾಜುವಿನ ಟ್ರಾಕ್ಟರ್ ಪೊಲೀಸ್ ಠಾಣೆಯಲ್ಲಿ ಇರವಂತಾಯಿತು. ಕಡೆಗೆ ಸಿಟ್ಟಿಗೆದ್ದ ಪೇದೆ ನಾರಾಯಣ ಮೂರ್ತಿ ಮರಳು ತಾರದೇ ಇದ್ದುದಕ್ಕೆ ನನ್ನ ಮೇಲೆ ಮನಸೋ ಇಚ್ಚೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದಾರೆ ಅಂತ ಡ್ರೈವರ್ ನಾಗರಾಜು ಆರೋಪಿಸಿದ್ದಾನೆ.