Asianet Suvarna News Asianet Suvarna News

ರಾಮಲಿಂಗಾರೆಡ್ಡಿ ನಡೆ ಸಸ್ಪೆನ್ಸ್‌

ರಾಜ್ಯ ರಾಜಕಾರಣದಲ್ಲಿ ತೃಪ್ತ ನಾಯಕರಾಗಿರುವ ರಾಮಲಿಂಗಾ ರೆಡ್ಡಿ ಅವರ ಮುಂದಿನ ನಡೆ ಸದ್ಯಕ್ಕೆ ಸಸ್ಪನ್ಸ್ ಆಗಿಯೇ ಉಳಿದಿದೆ. 

Congress Rebel Leader Ramalinga Reddy Suspense Movie
Author
Bengaluru, First Published Jul 13, 2019, 9:06 AM IST

ಬೆಂಗಳೂರು [ಜು.13] :  ಸಮ್ಮಿಶ್ರ ಸರ್ಕಾರ ತಮ್ಮನ್ನು ಕಡೆಗಣಿಸಿದೆ ಎಂದು ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಪ್ರಸಕ್ತ ನಡೆಯುತ್ತಿರುವ ಅಧಿವೇಶನದಲ್ಲಿ ಭಾಗಿಯಾಗುವ ಕುರಿತು ಕಾದು ನೋಡಿ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ಧನ ವಿನಿಯೋಗ ವಿಧೇಯಕ ಅಂಗೀಕಾರವಾಗಬೇಕಾಗಿದೆ. ಇದಕ್ಕೆ ನೀವೂ ಮತ ಹಾಕಬೇಕು. ಹಾಗಾಗಿ ಕಲಾಪಕ್ಕೆ ಹಾಜರಾಗುವಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ನಗುನಗುತ್ತಲೇ ಉತ್ತರಿಸಿದ ಅವರು, ಕಲಾಪದಲ್ಲಿ ಭಾಗಿಯಾಗುವ ಬಗ್ಗೆ ಕಾದು ನೋಡಿ ಎಂದು ತಿಳಿಸಿದ್ದಾರೆ.

ರಾಜೀನಾಮೆ ನೀಡುವುದಕ್ಕೂ ಮುನ್ನ ಬೆಂಗಳೂರು ನಗರದ ಕೆಲ ವಿಧಾನಸಭಾ ಕ್ಷೇತ್ರದ ಶಾಸಕರು ನನ್ನನ್ನು ಭೇಟಿಯಾಗಿದ್ದರು. ಆದರೆ, ಅವರಿಗೆ ನಾನು ಏನನ್ನೂ ತಿಳಿಸಿಲ್ಲ. ನನ್ನ ಮನಸಿಗೆ ಬೇಸರವಾಗಿದ್ದು, ರಾಜೀನಾಮೆ ನೀಡಿದ್ದೇನೆ ಎಂದರು.

ರಾಜೀನಾಮೆ ನೀಡಿರುವ ಸಂಬಂಧ ಸ್ಪೀಕರ್‌ ಅವರಿಗೆ ಏನು ಉತ್ತರ ನೀಡುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜುಲೈ 15ರ ವರೆಗೂ ರಾಜಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

ಸೌಮ್ಯಾ ರೆಡ್ಡಿ ಶಾಸಕ ಸ್ಥಾನದಲ್ಲಿ ಮುಂದುವರೆಯುವುದು ಬಿಡುವುದು ಅವರಿಗೆ ಬಿಟ್ಟವಿಚಾರವಾಗಿದೆ. ರಾಜಕಾರಣ ಸಂಬಂಧ ಸೌಮ್ಯಾ ರೆಡ್ಡಿ ಈವರೆಗೂ ನನ್ನ ಬಳಿ ಯಾವುದೇ ಸಲಹೆ ಕೇಳಿಲ್ಲ. ಕೇಳಿದರೆ ಅಗತ್ಯ ಸಲಹೆಗಳನ್ನು ನೀಡುತ್ತೇನೆ ಎಂದರು.

ರಾಜೀನಾಮೆ ನೀಡಲು ಸೂಚಿಸಿಲ್ಲ: ಸೌಮ್ಯಾ ರೆಡ್ಡಿ

ನನಗೆ ರಾಜೀನಾಮೆ ನೀಡುವಂತೆ ನಮ್ಮ ತಂದೆ ಸೂಚನೆ ನೀಡಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರಸ್ತುತ ನಮ್ಮ ತಂದೆ ಅಸಮಾಧಾನಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ಬೆಳವಣಿಗೆ ಹೇಗೆ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕು ಎಂದು ಹೇಳಿದ್ದಾರೆ.

ನಮ್ಮ ತಂದೆ ಕಳೆದ 45 ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿ ದುಡಿದಿದ್ದಾರೆ. ಅವರನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಂಡಿಲ್ಲ, ಈ ಅಂಶ ಎಲ್ಲರಿಗೂ ಗೊತ್ತಾಗಿದೆ. ನನ್ನ ಮುಂದಿನ ರಾಜಕೀಯ ಬೆಳವಣಿಗೆಯನ್ನು ಎಲ್ಲರಿಗೂ ತಿಳಿಸಿಯೇ ಮುಂದುವರೆಯುತ್ತೇನೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios