ಈ ಬಾರಿಯೂ ದಕ್ಷಿಣಕ್ಕೆ ವಿಪಕ್ಷ ನಾಯಕ ಪಟ್ಟ: ತರೂರ್‌ಗೆ ಹೊಣೆ?| ಲೋಕಸಭೆಯಲ್ಲಿ ಪಕ್ಷದ ನಾಯಕತ್ವ ವಹಿಸಲು ರಾಹುಲ್‌ ಹಿಂದೇಟು?| ಇಂಥ ಸಂದರ್ಭದಲ್ಲಿ ಪರ್ಯಾಯ ನಾಯಕರೊಬ್ಬರಿಗೆ ಸ್ಥಾನ ಖಚಿತ| ಈ ಪೈಕಿ ತರೂರ್‌, ಮುರಳೀಧರನ್‌, ಸುರೇಶ್‌ ಹೆಸರು ಮುಂಚೂಣಿಗೆ

ನವದೆಹಲಿ[ಮೇ.27]: ಈ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷ ಮತ್ತು ವಿಪಕ್ಷ ನಾಯಕ ಪಟ್ಟದಕ್ಷಿಣ ಭಾರತಕ್ಕೆ ಒಲಿಯುವ ಸಾಧ್ಯತೆ ಇದೆ. ಅಧಿಕೃತ ವಿಪಕ್ಷ ಸ್ಥಾನಮಾನ ಪಡೆಯಲು ಅಗತ್ಯವಾದ 55 ಸ್ಥಾನಗಳನ್ನು ಕಾಂಗ್ರೆಸ್‌ ಪಡೆದಿಲ್ಲ. ಆದರೂ ಕಳೆದ ಬಾರಿಯಂತೆ ಈ ಬಾರಿಯೂ ವಿಪಕ್ಷಗಳನ್ನು ತಮ್ಮ ನಾಯಕರೊಬ್ಬರನ್ನು ಆಯ್ಕೆ ಮಾಡಿಕೊಳ್ಳಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಹಜವಾಗಿಯೇ ಈ ಸ್ಥಾನ ಬಿಜೆಪಿ ನಂತರದಲ್ಲಿ ಅತಿದೊಡ್ಡ ಪಕ್ಷವಾದ ಕಾಂಗ್ರೆಸ್‌ಗೆ ಒಲಿಯಲಿದೆ.ಆದರೆ ವಿಪಕ್ಷ ನಾಯಕತ್ವ ಹೊಣೆ ವಹಿಸಿಕೊಳ್ಳಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ ಎನ್ನಲಾಗಿದೆ.

ಹಾಲಿ ರಾಜ್ಯಸಭೆಯಲ್ಲಿನ ವಿಪಕ್ಷ ನಾಯಕರಾಗಿ ಉತ್ತರ ಭಾರತದವರಾದ ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್‌ ಇದ್ದಾರೆ. ಹೀಗಾಗಿ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕತ್ವ ದಕ್ಷಿಣ ಭಾರತಕ್ಕೆ ನೀಡುವ ಸಾಧ್ಯತೆ ಇದೆ.

ಕಳೆದ ಬಾರಿ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಈ ಹೊಣೆ ಹೊತ್ತುಕೊಂಡಿದ್ದರು. ಈ ಬಾರಿ ಖರ್ಗೆ ಸೋಲನ್ನಪ್ಪಿದ್ದು, ಕಾಂಗ್ರೆಸ್‌ಗೆ ದೊಡ್ಡ ಹೊಡೆತ ನೀಡಿದೆ. ಹೀಗಾಗಿ ಈ ರೇಸ್‌ನಲ್ಲಿ ಕೇರಳದ ತಿರುವನಂತಪುರ ಲೋಕಸಭಾ ಕ್ಷೇತ್ರದ ಸಂಸದ ಶಶಿ ತರೂರ್‌, ಮಾವೆಲಿಕ್ಕರಾ ಕ್ಷೇತ್ರದಿಂದ ಸತತ 7ನೇ ಬಾರಿಗೆ ಆಯ್ಕೆಯಾದ ಸಂಸದ ಸುರೇಶ್‌ ಕೊಡಿಕುನ್ನಿಲ್‌ ಹಾಗೂ ಕೇರಳದ ಮಾಜಿ ಸಿಎಂ ಕರುಣಾಕರನ್‌ ಅವರ ಪುತ್ರ ಹಾಗೂ ಇದೀಗ ನಾಲ್ಕನೇ ಬಾರಿಗೆ ಸಂಸತ್ತಿಗೆ ಆಯ್ಕೆಯಾದ ಕೆ. ಮುರಳೀಧರನ್‌ ಹೆಸರುಗಳು ಮುಂಚೂಣಿಯಲ್ಲಿವೆ.