ಕಾಂಗ್ರೆಸ್ ಇತಿಹಾಸದಲ್ಲೇ ಇದು ಮೊದಲು. ಒಂದು ಹೊಸ ಇತಿಹಾಸ ಸೃಷ್ಟಿ ಮಾಡೋ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಯಾವ ಇತಿಹಾಸವನ್ನ ಸೃಷ್ಟಿಸಲು ಹೊರಟಿದ್ದಾರೆ ‘ಕೈ’ ನಾಯಕರು? ಅನ್ನೋದರ ಕುರಿತ ಎಕ್ಸ್'ಕ್ಲೂಸಿವ್ ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಅ.17): ಸಿಎಂ ಸಿದ್ದರಾಮಯ್ಯ ಮತ್ತು ಪರಮೇಶ್ವರ್, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಅದಕ್ಕಾಗಿಯೇ ಕಾಂಗ್ರೆಸ್'ನಲ್ಲಿ ಹೊಸ ಇತಿಹಾಸವನ್ನೇ ಬರೆಯಲು ಮುಂದಾಗಿರುವ ಇವರು, ಬಿಜೆಪಿಯಿಂದ ದೂರವಾಗಿರುವ ಲಿಂಗಾಯತರನ್ನು ಕಾಂಗ್ರೆಸ್'ಗೆ ಸೆಳೆಯಲು ಮುಂದಾಗಿದ್ದಾರೆ. ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿನ ಲಿಂಗಾಯತ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿತ್ತು. ಇದೀಗ ಪ್ರತ್ಯೇಕ ಧರ್ಮದ ಹೋರಾಟದ ಮೂಲಕ ಸ್ವಲ್ಪ ಪ್ರಮಾಣದ ಲಿಂಗಾಯತರು ಬಿಜೆಪಿಯಿಂದ ದೂರವಾಗಲಿದ್ದಾರೆ. ಬಿಜೆಪಿಯಿಂದ ದೂರವಾಗಿರುವ ಲಿಂಗಾಯತರನ್ನು ಕಾಂಗ್ರೆಸ್'ಗೆ ಸೆಳೆಯೋ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಹೆಚ್ಚು ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಟಿಕೇಟ್ ನೀಡೋ ಪ್ಲಾನ್ ಮಾಡಿದ್ದಾರೆ. 2013ರಲ್ಲಿ 44 ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಿದ್ದರೆ, ಈ ಬಾರಿ 60 ರಿಂದ 65 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವ ಚಿಂತನೆ ಕಾಂಗ್ರೆಸ್'ನದ್ದು.
ಈಗಾಗಲೇ ಅಹಿಂದ ಮತಗಳು ಕಾಂಗ್ರೆಸ್'ಗೆ ಗಟ್ಟಿ ಅನ್ನೋ ವಿಶ್ವಾಸದಲ್ಲಿರೋ ಸಿದ್ದರಾಮಯ್ಯ, ಪರಮೇಶ್ವರ್ ಶೇ 15 ರಷ್ಟು ಲಿಂಗಾಯತ ಮತಗಳು ಸಿಕ್ಕರೂ ಸಾಕು, ಉಳಿದ ಅಹಿಂದ ಮತಗಳು ಬಂದೇ ಬರುತ್ತೆ, ಅಭ್ಯರ್ಥಿ ಗೆದ್ದೇ ಗೆಲ್ತಾನೆ ಅನ್ನೋ ನಂಬಿಕೆಯಲ್ಲಿದ್ದಾರೆ. ಇದು ಎಷ್ಟರಮಟ್ಟಿಗೆ ಕೈ ಹಿಡಿಯುತ್ತೆ ಎನ್ನುವುದು ಮಾತ್ರ ಯಕ್ಷ ಪ್ರಶ್ನೆ.
