ಕಾಂಗ್ರೆಸಿಗರಿಂದಲೇ ಎಂ.ಬಿ.ಪಾಟೀಲ್ ವಿರುದ್ಧ ಆಕ್ರೋಶ
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್ ವಿರುದ್ಧ ಕಾಮಗ್ರೆಸಿಗರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು [ಜು.25]: ಅಧಿಕಾರದಲ್ಲಿ ಇದ್ದಾಗ ಪೊಲೀಸ್ ಅಧಿಕಾರಿಯೊಬ್ಬರ ವರ್ಗಾವಣೆ ಮಾಡಿಕೊಡಲಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ನೇತೃತ್ವದಲ್ಲಿ ಕೆಲ ಮುಖಂಡರು ಕೆಪಿಸಿಸಿ ಕಚೇರಿ ಬಳಿ ಬುಧವಾರ ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲ್ ಅವರನ್ನು ಅಡ್ಡಗಟ್ಟಿಅಸಮಾಧಾನ ವ್ಯಕ್ತಪಡಿಸಿದರು.
ಸಮ್ಮಿಶ್ರ ಸರ್ಕಾರದ ಪತನದ ಬೆನ್ನಲ್ಲೇ ಅಧಿಕಾರದ ಅವಧಿಯಲ್ಲಿ ತಮ್ಮ ಬೇಡಿಕೆ ಈಡೇರಿಸದ ಬಗ್ಗೆ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದ್ದು, ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ ಹಾಗೂ ಕೆಲ ಕಾರ್ಯಕರ್ತರು ಎಂ.ಬಿ. ಪಾಟೀಲ್ ಅವರನ್ನು ತಡೆದು ಹಲವು ಬಾರಿ ವರ್ಗಾವಣೆಗೆ ಮನವಿ ಮಾಡಿದರೂ ಮನ್ನಣೆ ನೀಡಲಿಲ್ಲ. ಇದೀಗ ಸರ್ಕಾರವೇ ಹೋಯಿತು, ಈಗ ನಾವು ಏನು ಮಾಡಬೇಕು ಎಂದು ಬೇಸರ ತೋಡಿಕೊಂಡರು.
ಇದಕ್ಕೆ ಎಂ.ಬಿ. ಪಾಟೀಲ್ ಅವರು, ಅಧಿಕಾರ ಹೋಯಿತು ಎಂಬುದು ನಿಮಗೂ ಗೊತ್ತಿದೆ. ಈಗ ನಾನೇನು ಮಾಡಲು ಸಾಧ್ಯ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.