ಬಿಜೆಪಿ ಡಿನ್ನರ್ಗೆ ರಮೇಶ್ ಜಾರಕಿಹೊಳಿ!
ಕಲಾಪಕ್ಕೆ ಗೈರಾಗಿದ್ದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಬುಧವಾರ ಅಚ್ಚರಿ ಎಂಬಂತೆ ಬಿಜೆಪಿ ನಾಯಕರು ಆಯೋಜಿಸಿದ್ದ ಔತಣ ಕೂಟದಲ್ಲಿ ಪಾಲ್ಗೊಂಡಿದ್ದಾರೆ. ಬಿಜೆಪಿ ಮುಖಂಡರೊಂದಿಗೆ ಕೂತು ಊಟ ಸವಿದಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ಬೆಳಗಾವಿ : ಸಂಪುಟ ಸಭೆ, ಹಲವು ದಿನಗಳ ಕಾಲ ಕಲಾಪಕ್ಕೆ ಗೈರಾಗಿದ್ದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಬುಧವಾರ ಅಚ್ಚರಿ ಎಂಬಂತೆ ಬಿಜೆಪಿ ನಾಯಕರು ಆಯೋಜಿಸಿದ್ದ ಔತಣ ಕೂಟದಲ್ಲಿ ಪಾಲ್ಗೊಂಡಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಮಂಗಳವಾರ ಆಯೋಜಿಸಿದ್ದ ಔತಣಕೂಟದಿಂದ ದೂರವುಳಿದಿದ್ದ ರಮೇಶ್ ಜಾರಕಿಹೊಳಿ ಈಗ ದಿಢೀರ್ ಆಗಿ ಬಿಜೆಪಿ ಮುಖಂಡರೊಂದಿಗೆ ಕೂತು ಊಟ ಸವಿದಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ವಿಧಾನ ಪರಿಷತ್ತಿನ ಪ್ರತಿಪಕ್ಷದ ಸಚೇತಕ ಮಹಾಂತೇಶ ಕವಟಗಿಮಠ ಅವರು ನಗರದ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯರಿಗಾಗಿ ಆಯೋಜಿಸಿದ್ದ ಔತಣಕೂಟದಲ್ಲಿ ಸಚಿವ ರಮೇಶ ಜಾರಕಿಹೊಳಿ ಪಾಲ್ಗೊಂಡರು. ನಂತರ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಕುಳಿತು ಭೋಜನ ಸವಿದು ತೆರಳಿದರು ಎಂದು ಮೂಲಗಳು ತಿಳಿವೆ.
ಡಿ.18ರಂದು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಹಾಜರಾಗದೆ ಅನಾರೋಗ್ಯದ ಕಾರಣ ನೀಡಿ ಸಭೆಯಿಂದ ದೂರ ಉಳಿದಿದ್ದ ಸಚಿವ ರಮೇಶ ಅವರು, ಅನಾರೋಗ್ಯದ ಕಾರಣ ನೀಡಿದ್ದರು. ಮಾತ್ರವಲ್ಲ, ಎರಡು ದಿನಗಳಿಂದ ಅಧಿವೇಶನಕ್ಕೆ ಗೈರಾಗಿದ್ದ ರಮೇಶ್ ಜಾರಕಿಹೊಳಿ ಅವರು ಬುಧವಾರ ಕೇವಲ 15 ನಿಮಿಷ ಕಾಲ ಕಲಾಪದಲ್ಲಿ ಭಾಗಿಯಾಗಿದ್ದರು. ಆದರೆ, ಸಚಿವ ಸಂಪುಟ ಸಭೆಗೆ ಗೈರಾಗಿದ್ದರು.
ಏತನ್ಮಧ್ಯೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬುಧವಾರ ಆಯೋಜಿಸಿದ್ದ ಔತಣಕೂಟದಿಂದಲೂ ರಮೇಶ್ ದೂರವುಳಿದಿದ್ದರು. ಈಗ ಬಿಜೆಪಿ ಔತಣಕೂಟದಲ್ಲಿ ಭಾಗಿಯಾಗುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ.