ಮಹಿಳಾ ಮತ್ತು ಮಕ್ಕಳ ಸಚಿವೆ ಜಯಮಾಲಾ ಅವರನ್ನು ಮೇಲ್ಮನೆ ಸಭಾನಾಯಕರನ್ನಾಗಿ ನೇಮಕ ಮಾಡುವುದಕ್ಕೆ ವಿಧಾನ ಕಾಂಗ್ರೆಸ್‌ನ ಹಿರಿಯ ವಿಧಾನ ಪರಿಷತ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಅವರನ್ನು ಸಭಾನಾಯಕರನ್ನಾಗಿ ಮಾಡಿದರೆ ನಾವು ಸಭೆಗೇ ಬರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.  

ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಸಚಿವೆ ಜಯಮಾಲಾ ಅವರನ್ನು ಮೇಲ್ಮನೆ ಸಭಾನಾಯಕರನ್ನಾಗಿ ನೇಮಕ ಮಾಡುವುದಕ್ಕೆ ವಿಧಾನ ಕಾಂಗ್ರೆಸ್‌ನ ಹಿರಿಯ ವಿಧಾನ ಪರಿಷತ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಅವರನ್ನು ಸಭಾನಾಯಕರನ್ನಾಗಿ ಮಾಡಿದರೆ ನಾವುಸಭೆಗೇ ಬರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 

Add Asianetnews Kannada as a Preferred SourcegooglePreferred

ಈ ಸಂಬಂಧ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನು ಖುದ್ದು ಭೇಟಿ ಮಾಡಿ ತಮ್ಮ ಅಭಿಪ್ರಾಯ ತಿಳಿಸಿರುವ ಉಗ್ರಪ್ಪ, ಎಚ್.ಎಂ.ರೇವಣ್ಣ ಮತ್ತಿತರರು, ಜಯಮಾಲಾಅವರನ್ನು ಸಭಾನಾಯಕರನ್ನಾಗಿ ನೇಮಿಸುವುದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. 

ಆಕ್ಷೇಪದ ನಡುವೆಯೂ ನೇಮಿಸಿದರೆ ನಾವ್ಯಾರೂ ಪರಿಷತ್ ಸಭಾ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ.ಆದರೆ, ವೇಣುಗೋಪಾಲ್ ಅವರಿಂದ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ. ಸಭಾ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂದೆಲ್ಲ ಹೇಳುವುದು ಸರಿಯಲ್ಲ. ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. 

ವೇಣುಗೋಪಾಲ್ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಹಲವು ಮೇಲ್ಮನೆ ಸದಸ್ಯರು ರಾಹುಲ್‌ಗಾಂಧಿ ಅವರಿಗೆ ಪತ್ರ ಬರೆಯಲು ನಿರ್ಧರಿಸಿದ್ದು, ಇದಕ್ಕಾಗಿ ಸಹಿ ಸಂಗ್ರಹ ಆರಂಭಿಸಿದ್ದಾರೆ. ಈ ಪತ್ರದಲ್ಲಿ ಜಯಮಾಲಾ ಅವರನ್ನು ಸಭಾನಾಯಕರನ್ನಾಗಿ ನೇಮಿಸಿದರೆ ನಾವು ಸಭೆಗೆ ಹಾಜರಾಗಲು ಕಷ್ಟವಾಗುತ್ತದೆ. 

ಹಾಗಾಗಿ ಅವರ ಬದಲು ಹಿರಿಯ ಸದಸ್ಯರೊಬ್ಬರನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸುವ ಅಂಶಗಳಿದ್ದು, ಪ್ರತಾಪ್‌ಚಂದ್ರ ಶೆಟ್ಟಿ ಹೊರತುಪಡಿಸಿ ಇತರೆ ಎಲ್ಲ ಸದಸ್ಯರೂ ಸಹಿ ಹಾಕಲು ಒಪ್ಪಿದ್ದಾರೆ ಎನ್ನಲಾಗಿದೆ.