ರಾಜ್ಯದಲ್ಲಿ ಜೋರಾಯ್ತು ಮಿನಿ ಸಮರದ ಫೈಟ್
ಮೊದಲಿನಿಂದಲೂ ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿಎಂ ಲಿಂಗಪ್ಪ ಈಗ ಕ್ಷೇತ್ರ ತೊರೆದಿದ್ದಾರೆ. ತಮ್ಮ ಪುತ್ರ ಬಿಜೆಪಿ ಚಂದ್ರಶೇಖರ್ ಪರ ಪ್ರಚಾರ ಮಾಡಬಹುದು ಅನ್ನುವ ಕಾರಣಕ್ಕೋ ಏನೋ ಸಿಎಂ ಲಿಂಗಪ್ಪರನ್ನ ಕಾಂಗ್ರೆಸ್ ಬಳ್ಳಾರಿ ಕ್ಷೇತ್ರದಲ್ಲಿ ಪ್ರಚಾರದ ಹೊಣೆ ನೀಡಿ ಶಿಫ್ಟ್ ಮಾಡಲಾಗಿದೆ.
ಬೆಂಗಳೂರು[ಅ.21]: ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣೆ ಪ್ರಚಾರ ಭರಾಟೆ ಜೋರಾಗಿದೆ. ಗಣಿನಾಡಲ್ಲಿ ಸೋಮಶೇಖರ್ ರೆಡ್ಡಿ, ಶ್ರೀರಾಮುಲು, ಅಭ್ಯರ್ಥಿ ಶಾಂತಾ ಅವರು ಕಾಲಿಗೆ ಚಕ್ರಕಟ್ಟಿ ಕೊಂಡವರಂತೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜಿಲ್ಲಾ ಚುನಾವಣಾ ಉಸ್ತುವರಿ ಡಿಕೆ ಶಿವಕುಮಾರ್, ಸಚಿವ ಯು.ಟಿ ಖಾದರ್ ಸೇರಿದಂತೆ ಗಣ್ಯ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮಧ್ಯೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ನಾವು ಒಗ್ಗಟ್ಟಾಗಿದ್ದೇವೆ ಅನ್ನುವ ಸಂದೇಶ ಈಗಾಗಲೇ ರವಾನಿಸಿದ್ದು, ಇದು ಬಿಜೆಪಿಗೆ ನಡುಕ ಹುಟ್ಟಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್ ಬಿಜೆಪಿಗೆ ಚಾಟಿ ಬಿಸಿದರು.
ಇತ್ತ ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರ ಪರ ಬಿಜೆಪಿ ನಾಯಕರಾದ ಸಿ.ಟಿ.ರವಿ, ತೇಜಸ್ವಿನಿ ಗೌಡ, ಶಾಸಕ ಪ್ರೀತಮ್ ಗೌಡ ಸೇರಿ ಬಿಜೆಪಿ ನಾಯಕರು ಮತಯಾಚಿಸಿದರು. ಇದೇ ವೇಳೆ ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟಿನ ಹೇಳಿಕೆಗೆ ಸಿ.ಟಿ ರವಿ ತಿರುಗೇಟು ಕೊಟ್ಟರು.
ರಾಮನಗರದಲ್ಲಿ ಸಿಎಂ ಹೆಚ್ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಕೂಡ ಶತಾಯಗತಾಯ ಗೆದ್ದೇ ಗೆಲ್ಲಬೇಕೆಂದು ಪಣ ತೊಟ್ಟಿದ್ದಾರೆ. ಇಂದು ತಾಲೂಕಿನ ಹುಣಸನಹಳ್ಳಿ ಬಳಿ ಮುಸ್ಲಿಂ ಸಮುದಾಯದ ಮುಖಂಡರು, ಕಾರ್ಯಕರ್ತರ ಸಭೆ ನಡೆಸಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು.
ಕಾಂಗ್ರೆಸ್ ಎಂಎಲ್ಸಿ ಸಿಎಂ ಲಿಂಗಪ್ಪ ಬಳ್ಳಾರಿಗೆ ಶಿಫ್ಟ್
ಮೊದಲಿನಿಂದಲೂ ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿಎಂ ಲಿಂಗಪ್ಪ ಈಗ ಕ್ಷೇತ್ರ ತೊರೆದಿದ್ದಾರೆ. ತಮ್ಮ ಪುತ್ರ ಬಿಜೆಪಿ ಚಂದ್ರಶೇಖರ್ ಪರ ಪ್ರಚಾರ ಮಾಡಬಹುದು ಅನ್ನುವ ಕಾರಣಕ್ಕೋ ಏನೋ ಸಿಎಂ ಲಿಂಗಪ್ಪರನ್ನ ಕಾಂಗ್ರೆಸ್ ಬಳ್ಳಾರಿ ಕ್ಷೇತ್ರದಲ್ಲಿ ಪ್ರಚಾರದ ಹೊಣೆ ನೀಡಿ ಶಿಫ್ಟ್ ಮಾಡಲಾಗಿದೆ. ಒಟ್ಟಿನಲ್ಲಿ, ವಾರದ ಕೊನೆಯ ದಿನವೂ ಕದನ ಕಣ ರಂಗೇರಿತ್ತು. ಈ ಮೂಲಕ ಬೈ ಎಲೆಕ್ಷನ್ ಮತ್ತಷ್ಟು ಕಾವೇರಿದೆ.