ಮುಂದಿನ ಮುಖ್ಯಮಂತ್ರಿ ಯಾರನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ವಲಯದಲ್ಲಿ ನಡೆದ ಆಂತರಿಕ ಚರ್ಚೆಯಲ್ಲಿ ಖರ್ಗೆ ಪರ ಹೆಚ್ಚು ಒಲವು ವ್ಯಕ್ತವಾಗಿದೆ. ರಾಜ್ಯದ ಬಹುತೇಕ ಕಾಂಗ್ರೆಸ್ ಮುಖಂಡರು ಮಲ್ಲಿಕಾರ್ಜುನ ಖರ್ಗೆಯವರನ್ನು ಸಿಎಂ ಆಗಿ ಸ್ವೀಕರಿಸಲು ಸಿದ್ಧರಿದ್ದಾರಂತೆ. ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಖರ್ಗೆ ಪ್ರಮುಖ ಪಾತ್ರ ವಹಿಸಬಹುದು ಎಂಬ ಸುದ್ದಿಯೂ ಇದೆ.

ಬೆಂಗಳೂರು(ಜೂನ್ 14): ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಲು ಪಕ್ಷದ ಹೈಕಮಾಂಡ್ ಯೋಜಿಸಿದೆ ಎಂಬ ಸುದ್ದಿ ಕಾಂಗ್ರೆಸ್ ವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿದೆ. ತಮ್ಮ ನೇತೃತ್ವದಲ್ಲೇ ವಿಧಾನಸಭೆ ಚುನಾವಣೆಗೆ ಇಳಿಯಲು ಸಜ್ಜಾಗಿರುವ ಸಿದ್ದರಾಮಯ್ಯಗೆ ಶಾಕ್ ಕೊಡುವಂಥ ಸುದ್ದಿ ಇದಾಗಿದೆ. ಕಾಂಗ್ರೆಸ್ ಮೂಲಗಳು ತಿಳಿಸಿರುವ ಪ್ರಕಾರ, ಖರ್ಗೆಗೆ ಸಿಎಂ ಪಟ್ಟ ಕಟ್ಟಲು ಹೈಕಮಾಂಡ್ ಈಗಾಗಲೇ ಸಿಎಂ ಜೊತೆ ಚರ್ಚೆಯನ್ನೂ ನಡೆಸಿದೆ. ಇದಕ್ಕೆ ಸಿಎಂ ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ನೀಡಿದ್ದಾರೆನ್ನಲಾಗಿದೆ.

Add Asianetnews Kannada as a Preferred SourcegooglePreferred

ಖರ್ಗೆ ಪ್ರಭಾವ ವಿಸ್ತಾರ:
ಗಾಂಧಿ ಕುಟುಂಬದೊಂದಿಗೆ ಮಲ್ಲಿಕಾರ್ಜುನ ಖರ್ಗೆ ಹೊಂದಿರುವ ಅಚಲ ನಿಷ್ಠೆ ಪ್ರಶ್ನಾತೀತವಾದುದು. ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಾಗ ಮಲ್ಲಿಕಾರ್ಜುನ ಖರ್ಗೆಯವರೇ ಸಿಎಂ ಆಗಬಹುದು ಎಂಬ ಸ್ಥಿತಿ ಇತ್ತು. ಆದರೆ, ಸಿದ್ದರಾಮಯ್ಯಗೆ ಸಿಎಂ ಪಟ್ಟ ಕಟ್ಟಲು ಹೈಕಮಾಂಡ್ ನಿರ್ಧರಿಸಿದಾಗ ಖರ್ಗೆ ತಲೆಬಾಗಿದರು. ಆಗ ಖರ್ಗೆ ಹಠ ಹಿಡಿದಿದ್ದರೆ ಸಿಎಂ ಪಟ್ಟ ದಕ್ಕಿಸಿಕೊಳ್ಳಬಹುದಿತ್ತು ಎಂದು ಮೂಲಗಳು ಹೇಳುತ್ತವೆ. ಸಿಎಂ ಬದಲಾಗಿ ಖರ್ಗೆಗೆ ಕೇಂದ್ರ ಸಚಿವ ಸ್ಥಾನ ಹಾಗೂ ವಿಪಕ್ಷ ಮುಖಂಡನ ಸ್ಥಾನಗಳನ್ನು ಕಾಂಗ್ರೆಸ್ ನೀಡಿ ಸಮಾಧಾನ ಮಾಡಿತ್ತು

ಈಗ ಮಲ್ಲಿಕಾರ್ಜುನ ಖರ್ಗೆ ಮತ್ತೊಮ್ಮೆ ರಾಜ್ಯ ರಾಜಕೀಯದಲ್ಲಿ ಆಸಕ್ತಿ ತೋರಿದ್ದಾರೆ. ಆದರೆ, ಸಿಎಂ ಪಟ್ಟ ಬಿಟ್ಟು ಬೇರಾವುದರಲ್ಲೂ ಅವರು ಆಸಕ್ತರಾಗಿಲ್ಲ. ವರ್ಷಗಳಿಂದ ರಾಜ್ಯ ರಾಜಕಾರಣದಿಂದ ದೂರವಿದ್ದ ಖರ್ಗೆ ಈಗ ನಿಧಾನವಾಗಿ ಹಿಡಿತ ಸಾಧಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ, ಕೆಪಿಸಿಸಿ ಅಧ್ಯಕ್ಷರಾಗಿ ಜಿ.ಪರಮೇಶ್ವರ್ ಮುಂದುವರಿದಿರುವುದು. ಕೆಪಿಸಿಸಿ ಪಟ್ಟವನ್ನು ಜಿ.ಪ. ಬಿಟ್ಟು ಬೇರೆಯವರಿಗೆ ಕೊಡುವುದು ಸಿಎಂ ಚಿಂತನೆಯಾಗಿತ್ತಂತೆ. ಆದರೆ, ಖರ್ಗೆಯೇ ಮುತುವರ್ಜಿ ವಹಿಸಿ ಹೈಕಮಾಂಡ್ ಮೇಲೆ ಒತ್ತಡ ಹಾಕಿ ಪರಮೇಶ್ವರ್ ಅವರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವಂತೆ ಮಾಡಿದ್ದಾರೆನ್ನಲಾಗಿದೆ. ಇದು ಖರ್ಗೆ ಹೊಂದಿರುವ ಪ್ರಭಾವದ ಒಂದು ಚಿಕ್ಕ ಸ್ಯಾಂಪಲ್.

ಈಗ ಮುಂದಿನ ಮುಖ್ಯಮಂತ್ರಿ ಯಾರನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ವಲಯದಲ್ಲಿ ನಡೆದ ಆಂತರಿಕ ಚರ್ಚೆಯಲ್ಲಿ ಖರ್ಗೆ ಪರ ಹೆಚ್ಚು ಒಲವು ವ್ಯಕ್ತವಾಗಿದೆ. ರಾಜ್ಯದ ಬಹುತೇಕ ಕಾಂಗ್ರೆಸ್ ಮುಖಂಡರು ಮಲ್ಲಿಕಾರ್ಜುನ ಖರ್ಗೆಯವರನ್ನು ಸಿಎಂ ಆಗಿ ಸ್ವೀಕರಿಸಲು ಸಿದ್ಧರಿದ್ದಾರಂತೆ. ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಖರ್ಗೆ ಪ್ರಮುಖ ಪಾತ್ರ ವಹಿಸಬಹುದು ಎಂಬ ಸುದ್ದಿಯೂ ಇದೆ.