2019ರ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಸಮನ್ವಯ ಸಮಿತಿ ರಚನೆ
ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಾವು ಯಾತ್ರೆ ಕೈಗೊಳ್ಳುವುದಕ್ಕೂ ಮುನ್ನ ಪಕ್ಷದ 2 ಮಹತ್ವದ ಸಮಿತಿಗಳನ್ನು ಘೋಷಣೆ ಮಾಡುವ ನಿರೀಕ್ಷೆಯಿದೆ. 2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಸಮಿತಿಗಳನ್ನು ರಚಿಸಲಾಗುತ್ತಿದೆ
ನವದೆಹಲಿ: ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಾವು ಯಾತ್ರೆ ಕೈಗೊಳ್ಳುವುದಕ್ಕೂ ಮುನ್ನ ಪಕ್ಷದ 2 ಮಹತ್ವದ ಸಮಿತಿಗಳನ್ನು ಘೋಷಣೆ ಮಾಡುವ ನಿರೀಕ್ಷೆಯಿದೆ. 2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಸಮಿತಿಗಳನ್ನು ರಚಿಸಲಾಗುತ್ತಿದೆ
ಪಕ್ಷದಲ್ಲಿ ಅವರು ಸಮನ್ವಯ ಸಮಿತಿ ರಚಿಸುವ ಸಾಧ್ಯತೆ ಇದ್ದು, ಇದಕ್ಕೆ ಹಿರಿಯ ಮುಖಂಡ ಜೈರಾಮ್ ರಮೇಶ್ ಅಧ್ಯಕ್ಷರಾಗಿರಲಿದ್ದಾರೆ. ಇನ್ನೊಂದು ಸಮಿತಿಯನ್ನು ದಿಲ್ಲಿಯ ಬುದ್ಧಿಜೀವಿಗಳು ಹಾಗೂ ಸೆಲೆಬ್ರಿಟಿಗಳನ್ನು ತಲುಪಲು ರಚಿಸಲಾಗುತ್ತಿದ್ದು, ಇದಕ್ಕೂ ಜೈರಾಂ ಅವರೇ ಅಧ್ಯಕ್ಷರಾಗಿರಲಿದ್ದಾರೆ. ಸಮನ್ವಯ ಸಮಿತಿಯಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್, ರಾಜ್ಯಸಭಾ ವಿಪಕ್ಷ ಉಪನಾಯಕ ಆನಂದ ಶರ್ಮಾ ಹಾಗೂ ರಾಹುಲ್ ಗಾಂಧಿ ಅವರ ಆಪ್ತ ಕೆ. ರಾಜು ಇರಲಿದ್ದಾರೆ ಎಂದು ಮೂಲಗಳು ಹೇಳಿವೆ.
ಸಮಿತಿಯ ಧ್ಯೇಯ:
ಚುನಾವಣೆ ಸಿದ್ಧತೆ ನಡೆಸುವುದು, ಪಕ್ಷ ಹಾಗೂ ರಾಹುಲ್ ಗಾಂಧಿ/ಸೋನಿಯಾ ಗಾಂಧಿ ಅವರ ನಡುವೆ ಸಂಪರ್ಕ ಸೇತುವಂತೆ ಕೆಲಸ ಮಾಡುವುದು ಸಮನ್ವಯ ಸಮಿತಿಯ ಧ್ಯೇಯ. ಇದೇ ವೇಳೆ ಇನ್ನೊಂದು ಸಮಿತಿಯು ದಿಲ್ಲಿಯಲ್ಲಿನ ಗಣ್ಯರು ಹಾಗೂ ಸೆಲೆಬ್ರಿಟಿಗಳ ಜತೆ ಸಮಾಲೋಚನೆ ನಡೆಸಿ ಪಕ್ಷದ ಉತ್ತಮ ಕಾರ್ಯನಿರ್ವಹಣೆಗಾಗಿ ಸಲಹೆ ಸೂಚನೆಗಳನ್ನು ಪಡೆಯಲಿದೆ. ಈಗಾಗಲೇ ರಾಹುಲ್ ಗಾಂಧಿ ಅವರು ಜೈರಾಮ್ ಜತೆ 2 ಸುತ್ತಿನ ಮಾತುಕತೆ ನಡೆಸಿದ್ದು, ಇನ್ನೊಂದು ಸುತ್ತಿನ ಚರ್ಚೆ ಬಾಕಿ ಇದೆ. ಶೀಘ್ರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.