ಮತದಾರರಿಗೆ ಹಣದ ಆಮಿಷವೊಡ್ಡಿ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಚಿತ್ರನಟ ಹಾಗೂ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ (ಕೆಪಿಜೆಪಿ) ನಾಯಕ ಉಪೇಂದ್ರ ವಿರುದ್ಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಬೆಂಗಳೂರು ನಗರ ಜೆಡಿಯು ಘಟಕವು ಗುರುವಾರ ದೂರು ದಾಖಲಿಸಿದೆ.
ಬೆಂಗಳೂರು: ಮತದಾರರಿಗೆ ಹಣದ ಆಮಿಷವೊಡ್ಡಿ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಚಿತ್ರನಟ ಹಾಗೂ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ (ಕೆಪಿಜೆಪಿ) ನಾಯಕ ಉಪೇಂದ್ರ ವಿರುದ್ಧ ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಬೆಂಗಳೂರು ನಗರ ಜೆಡಿಯು ಘಟಕವು ಗುರುವಾರ ದೂರು ದಾಖಲಿಸಿದೆ.
ಆದರೆ ದೂರು ಸ್ವೀಕರಿಸಿದ ಪೊಲೀಸರು ಈ ಬಗ್ಗೆ ಎಫ್ಐಆರ್ ದಾಖಲಿಸಿಲ್ಲ. ನಗರದ ಗಾಂಧಿ ಭವನದಲ್ಲಿ ಅ.31ರಂದು ಅಧಿಕೃತವಾಗಿ ತಮ್ಮ ಪಕ್ಷದ ಉದ್ಘಾಟನಾ ಸಮಾರಂಭದಲ್ಲಿ ‘ಬೇರೆ ಪಕ್ಷಗಳ ಮುಖಂಡರು ಹಣ ನೀಡಿದರೆ ಜನರು ಆ ಹಣ ಪಡೆಯಲಿ. ಅದು ಅವರದೇ ಹಣ. ತಪ್ಪೇನಿಲ್ಲ’ ಎಂದು ಉಪೇಂದ್ರ ಹೇಳಿಕೆ ನೀಡಿದ್ದರು.
ಈ ಮೂಲಕ ಹಣ ಪಡೆದು ಮತ ಹಾಕಲು ಅವರು ಪ್ರಚೋದನೆ ನೀಡಿದಂತಾಗಿದೆ. ಅಲ್ಲದೆ, ಹಣದ ಆಮಿಷಕ್ಕೆ ತಮ್ಮ ಬೆಂಬಲವಿದೆ ಎಂಬುದಾಗಿ ಹೇಳಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಸಗಿದ ಅಪಚಾರವಾಗಿದೆ ಎಂದು ಬೆಂಗಳೂರು ನಗರ ಜೆಡಿಯು ಘಟಕದ ಪ್ರಧಾನ ಕಾರ್ಯದರ್ಶಿ ನಾಗೇಶ್ ದೂರಿನಲ್ಲಿ ಆರೋಪಿಸಿದ್ದಾರೆ.
ಮತದಾರರಿಗೆ ಪ್ರಚೋದನೆ ನೀಡಿದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ನಾಯಕರನ್ನು ಕಾನೂನಿನಡಿ ಬಂಧಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
