ಬಿಜೆಪಿ ಮುಖಂಡ ಈಶ್ವರಪ್ಪ ವಿರುದ್ಧ ದೂರು
ಬಿಜೆಪಿ ಮುಖಂಡ ಈಶ್ವರಪ್ಪ ವಿರುದ್ಧ ದೂರು ದಾಖಲಾಗಿದೆ. ಕಾರಣವೇನು?
ಆನೇಕಲ್ : ರಾಜಕೀಯ ಒಳ ಆಟ ನಡೆಸಿ ಬೋವಿ ಜನಾಂಗವನ್ನು ಛಿದ್ರ ಛಿದ್ರಗೊಳಿಸುವ ದುರುದ್ದೇಶ ಹೊಂದಿರುವ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಪದೇ ಪದೇ ವಡ್ಡ ಪದ ಬಳಕೆ ಮಾಡಿ, ತಮ್ಮಲ್ಲಿನ ಅನಾಗರಿಕತೆಯನ್ನು ಪ್ರದರ್ಶಿಸಿದ್ದಾರೆ ಎಂದು ಕರ್ನಾಟಕ ಭೋವಿ ಸಂಘರ್ಷ ಸುತಿಯ ಅಧ್ಯಕ್ಷ ಗೌತಮ್ ವೆಂಕಿ ಕಿಡಿ ಕಾರಿದ್ದಾರೆ.
ಅವರು ಆನೇಕಲ್ ತಾಲೂಕಿನ ಸೂರ್ಯ ನಗರ ಠಾಣೆಯಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡದ ಕಾಯ್ದೆಯಡಿ ಈಶ್ವರಪ್ಪನವರ ವಿರುದ್ಧ ದೂರು ದಾಖಲಿಸುವಂತೆ ಒತ್ತಾಯಿಸಿ ಮಾತನಾಡಿ, ಧಾರವಾಡದ ಕುಂದಗೋಳದಲ್ಲಿ ಕೆಲ ದಿನಗಳ ಹಿಂದೆ ಸಾರ್ವಜನಿಕ ಸಭೆಯಲ್ಲಿ ಈಶ್ವರಪ್ಪ ನಮ್ಮ ವಿಬೋ ಜನಾಂಗವನ್ನು ವಡ್ಡ ಪದವನ್ನು ಅನೇಕ ಸಲ ಬಳಸಿ ಜನಾಂಗ ನಿಂದನೆ ಮಾಡಿದ್ದಾರೆ. ಅವರ ದೋಷಪೂರಿತ ಹೇಳಿಕೆಯಿಂದ ಜನಾಂಗ ಬಂಧುಗಳ ಮಾನಸಿಕ ಧಕ್ಕೆಗೆ ಕಾರಣರಾಗಿದೆ ಎಂದು ದೂರಿದ್ದಾರೆ.
ಹಾರಗದ್ದೆ ಗ್ರಾಮ ಪಂಚಾಯಿತಿ ಆಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಜಿ.ಹರೀಶ್, ರಾಮಾಂಜಿನಪ್ಪ, ಕಟ್ಟಿಆನಂದ್, ಅಂಬರೀಶ್, ದೇವರಾಜ್ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದರು.