ಚುನಾವಣೆ ನೀತಿ ಸಂಹಿತೆ ಬಿಸಿ ಅಹೋರಾತ್ರಿ ನಡೆಯುವ ಯಕ್ಷಗಾನಕ್ಕೂ ತಟ್ಟಿದೆ. ರಾತ್ರಿಯಿಂದ ಬೆಳಗಿನ ತನಕ ಪ್ರದರ್ಶಿಸಲ್ಪಡುವ ಪ್ರಸಂಗವನ್ನು ರಾತ್ರಿ 10 ಗಂಟೆಯೊಳಗೆ ಮುಗಿಸುವಂತೆ ಅಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ.

ಬೆಂಗಳೂರು (ಏ. 02): ಚುನಾವಣೆ ನೀತಿ ಸಂಹಿತೆ ಬಿಸಿ ಅಹೋರಾತ್ರಿ ನಡೆಯುವ ಯಕ್ಷಗಾನಕ್ಕೂ ತಟ್ಟಿದೆ. ರಾತ್ರಿಯಿಂದ ಬೆಳಗಿನ ತನಕ ಪ್ರದರ್ಶಿಸಲ್ಪಡುವ ಪ್ರಸಂಗವನ್ನು ರಾತ್ರಿ 10 ಗಂಟೆಯೊಳಗೆ ಮುಗಿಸುವಂತೆ ಅಧಿಕಾರಿಗಳು ತಾಕೀತು ಮಾಡುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಈ ಮೂರು ಜಿಲ್ಲೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡುವ ಹಲವು ಮೇಳಗಳಿವೆ. ಈ ಎಲ್ಲ ಮೇಳಗಳ ಪ್ರದರ್ಶನ ರಾತ್ರಿ 9. 30 ರಿಂದ ಆರಂಭವಾಗಿ ಬೆಳಗಿನ ತನಕ ನಡೆಯುತ್ತವೆ. ಈಗ ಚುನಾವಣೆ ಹಿನ್ನೆಲೆ ಅಧಿಕಾರಿಗಳು ಕೈಗೊಳ್ಳುತ್ತಿರುವ ಕ್ರಮ ಕಲಾವಿದರು ಹಾಗೂ ಯಕ್ಷಗಾನ ಕಲಾಸಕ್ತರಿಗೆ ತೀವ್ರ ನಿರಾಸೆಯನ್ನು ಉಂಟುಮಾಡಿದೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ರಾತ್ರಿ 10 ಗಂಟೆ ಬಳಿಕ ಧ್ವನಿವರ್ಧಕ ಬಳಸಿ ಶಾಂತಿ ಭಂಗ ಮಾಡುವಂತಿಲ್ಲ. ಈ ಆದೇಶವನ್ನು ಚುನಾವಣೆ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಲು ಅಧಿಕಾರಿಗಳು ಮುಂದಾಗಿದ್ದಾರೆ. ರಾತ್ರಿ ಗದ್ದಲ, ಗಲಾಟೆ ನಡೆದು ಶಾಂತಿ ಭಂಗ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯಕ್ಷಗಾನ, ನಾಟಕ ಮತ್ತಿತರ ಕಾರ್ಯಕ್ರಮಗಳನ್ನೂ 10 ಗಂಟೆಗೆ ಮುಗಿಸುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುತ್ತಿದೆ. ಮಂಗಳವಾರ ಅಂಕೋಲಾದ ತೆಂಕಣಕೇರಿಯಲ್ಲಿ ಯಕ್ಷಗಾನ ನಡೆಸುತ್ತಿದ್ದ ವೇಳೆ ಅಧಿಕಾರಿಗಳು ಈ ಬಗ್ಗೆ ಖಡಕ್ ಎಚ್ಚರಿಕೆ ನೀಡಿ ಹೋಗಿದ್ದಾರೆ.