ಪ್ರಧಾನಿ ಮೋದಿಗೆ ಪತ್ರ ಬರೆದು ಸರ್ಕಾರದ ನಿರ್ಣಯದ ಬಗ್ಗೆ ಮಾಹಿತಿ ನೀಡಿದ ಸಿಎಂ
ಬೆಂಗಳೂರು(ಸೆ.25): ವಿಶೇಷ ಅಧಿವೇಶನದಲ್ಲಿ ಸರ್ಕಾರದ ನಿರ್ಣಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿಗೆ ತುರ್ತಾಗಿ ಮಧ್ಯಂತರ ಅರ್ಜಿ ಸಲ್ಲಿಸುವಂತೆ ಕಾನೂನು ಪಂಡಿತರು ರಾಜ್ಯ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿಚಾರಗೋಷ್ಟಿಯಲ್ಲಿ ಮಾತಾಡಿದ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಹಳ್ಳಿ, ಸುಪ್ರೀಂ ಕೋರ್ಟಿನಲ್ಲಿ ಇದೇ 27ರಂದು ಕಾವೇರಿ ಪ್ರಕರಣ ವಿಚಾರಣೆಗೆ ಬರೋ ಮುನ್ನ ರಾಜ್ಯ ಸರ್ಕಾರ ತುರ್ತಾಗಿ ಮಧ್ಯಂತರ ಅರ್ಜಿ ಸಲ್ಲಿಸಿ ರಾಜ್ಯದ ಜಲಕ್ಷಾಮದ ಬಗ್ಗೆ ಮನವರಿಕೆ ಮಾಡಿಕೊಡಲಿ ಎಂದು ಸಲಹೆ ಕೊಟ್ಟಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ. ಆಚಾರ್ಯ ಮತ್ತು ಪ್ರೊ.ರವಿವರ್ಮ ಕುಮಾರ್, ಪ್ರಧಾನ ಮಂತ್ರಿ ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸಲಿ ಎಂದ್ರು.. ಈ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರಮೋದಿಯವರಿಗೆ ಪತ್ರ ಬರೆದು ಸರ್ಕಾರದ ನಿರ್ಣಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ದಿನಾಂಕ 23-09-2016ರಂದು ರಾಜ್ಯ ವಿಧಾನಮಂಡಲ ವಿಶೇಷ ಅಧಿವೇಶನದ ಎರಡೂ ಸದನಗಳಲ್ಲಿ ಅಂಗೀಕಾರವಾದ ನಿರ್ಣಯದ ಪ್ರತಿಯನ್ನು ನಾನು ನಿಮಗೆ ಕಳುಹಿಸುತ್ತಿದ್ದೇನೆ. ರಾಜ್ಯದ ನಾಲ್ಕು ಜಲಾಶಯಗಳಲ್ಲಿ ಶೇಖರಣೆಯಾಗಿರುವ 26.33 ಟಿಎಂಸಿಗಳಷ್ಟು ನೀರನ್ನು ಕಾವೇರಿ ಜಲಾಜನಯನ ಭಾಗದ ಗ್ರಾಮಗಳು ಮತ್ತು ಬೆಂಗಳೂರಿನ ಜನರಿಗೆ ಕೇವಲ ಕುಡಿಯಲು ಹೊರತುಪಡಿಸಿ ಬೇರೆ ಯಾವ ಉದ್ದೇಶಕ್ಕೂ ಹೊರತೆಗೆಯಬಾರದು ಎಂದು ಸದನ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಘನತೆವೆತ್ತ ಸರ್ವೋಚ್ಛ ನ್ಯಾಯಾಲಯ ದಿನಾಂಕ 20-09-2016ರಂದು ತನ್ನ ಮಧ್ಯಂತರ ತೀರ್ಪಿನಲ್ಲಿ ತಮಿಳುನಾಡಿಗೆ 27-09-2016ರವೆರಗೂ ಪ್ರತಿನಿತ್ಯ 6000 ಕ್ಯೂಸೆಕ್ ನೀರು ಹರಿಸಲು ಆದೇಶಿಸಿದೆ.
ವಿಧಾನಮಂಡಲದ ನಿರ್ಣಯದ ಜೊತೆಗೆ ರಾಜ್ಯ ಸರ್ಕಾರವು ಘನತೆವೆತ್ತ ಸರ್ವೋಚ್ಛ ನ್ಯಾಯಾಲಯಕ್ಕೆ ಸೋಮವಾರ ಅಂದರೆ ದಿನಾಂಕ 26-09-2016ರಂದು ದಿನಾಂಕ 20-09-2016ರಂದು ನೀಡಿದ ಮಧ್ಯಂತರ ಆದೇಶವನ್ನು ಮಾರ್ಪಾಡು ಮಾಡುವಂತೆ ಅರ್ಜಿ ಸಲ್ಲಿಸುವ ಪ್ರಸ್ತಾಪಕ್ಕೆ ಬಂದಿದೆ.
ನನ್ನ ಸರ್ಕಾರಕ್ಕೆ ಘನತವೆತ್ತ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಕಡೆಗಣಿಸುವ ಯಾವುದೇ ಉದ್ದೇಶ ಇಲ್ಲ.
ಇದು ನಿಮ್ಮ ಮಾಹಿತಿಗಾಗಿ
ತಮ್ಮ ವಿಶ್ವಾಸಿ,
ಸಿದ್ದರಾಮಯ್ಯ
ಕೇಂದ್ರ ಸರ್ಕಾರಕ್ಕೆ ಸದನ ನಿರ್ಣಯದ ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, ಸೋಮವಾರ ಮಧ್ಯಂತರ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಇನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಇವತ್ತು ನವದೆಹಲಿಗೆ ತೆರಳಿ ರಾಜ್ಯದ ಪರ ವಕೀಲ ಫಾಲಿ ನಾರಿಮನ್ ಅವರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ಈ ಕುರಿತ ಸ್ಪಷ್ಟ ಚಿತ್ರಣ ಸೋಮವಾರ ಸುಪ್ರೀಂ ಕೋರ್ಟ್'ನಲ್ಲಿ ಸಿಗಲಿದೆ.