ಬಿಎಸ್ವೈ ಕಾಂಗ್ರೆಸ್ಸಿಗೆ ಬರ್ತೀನಿ ಅಂದರೂ ಸೇರಿಸಲ್ಲ: ಸಿಎಂ
ಹುಟ್ಟು ಕಾಂಗ್ರೆಸ್ಸಿಗರು, ಯಜಮಾನರೂ ಆದ ಡಾ.ಶಾಮನೂರು ಶಿವಶಂಕರಪ್ಪ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಡಿಸ್ಟರ್ಬ್ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕಸ್ಮಾತ್ ಕಾಂಗ್ರೆಸ್ಸಿಗೆ ಬರುತ್ತೇವೆಂದರೂ ನಾವಂತೂ ಸೇರಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದಾವಣಗೆರೆ: ಹುಟ್ಟು ಕಾಂಗ್ರೆಸ್ಸಿಗರು, ಯಜಮಾನರೂ ಆದ ಡಾ.ಶಾಮನೂರು ಶಿವಶಂಕರಪ್ಪ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಡಿಸ್ಟರ್ಬ್ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಕಸ್ಮಾತ್ ಕಾಂಗ್ರೆಸ್ಸಿಗೆ ಬರುತ್ತೇವೆಂದರೂ ನಾವಂತೂ ಸೇರಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಹೈಸ್ಕೂಲ್ ಮೈದಾನದಲ್ಲಿ .3 ಸಾವಿರ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ, ಉದ್ಘಾಟನೆ ನೆರವೇರಿಸಿ ಮಾತನಾಡಿ, ತುಮಕೂರಿನಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಯಡಿಯೂರಪ್ಪ ಜೊತೆಗೆ ಕುಳಿತು ಊಟ ಮಾಡಿರಬಹುದು. ಆಕಸ್ಮಿಕವಾಗಿ ಸಮಾಜದ ವಿಚಾರ, ಪಕ್ಷದ ವಿಚಾರ ಮಾತನಾಡಿರಬಹುದು. ಆದರೆ, ಯಾವುದೇ ಕಾರಣಕ್ಕೂ ಶಾಮನೂರು ಕಾಂಗ್ರೆಸ್ ಬಿಡುವುದಿಲ್ಲ ಎಂದರು.
ಯಡಿಯೂರಪ್ಪ ಭೇಟಿ ಹಿನ್ನೆಲೆಯಲ್ಲಿ ಉಂಟಾದ ವದಂತಿಗೆ ಶಾಮನೂರು ಶಿವಶಂಕರಪ್ಪ ಸೌಜನ್ಯದಿಂದ ಪ್ರತಿಕ್ರಿಯಿಸಿದ್ದಾರೆ. ಕೋಮುವಾದಿ ಆರೆಸ್ಸೆಸ್, ಬಿಜೆಪಿಯ ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು. ಲಂಚದ ಹಣವನ್ನು ಚೆಕ್ನಲ್ಲಿ ಪಡೆದ ವ್ಯಕ್ತಿ. ಇಂತಹವರನ್ನು ನಾವು ಪಕ್ಷಕ್ಕೆ ಕಾಲಿಡಲೂ ಬಿಡಲ್ಲ ಎಂದು ಹೇಳಿದರು.
3 ಸ್ಥಾನ ನಾವೇ ಗೆಲ್ಲುತ್ತೇವೆ:
ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ನಾವೇ ಗೆಲುವು ಸಾಧಿಸಲಿದ್ದು, ನಮಗೆ ಯಾರ ಬೆಂಬಲವೂ ಬೇಕಿಲ್ಲ. ಕಾಂಗ್ರೆಸ್ನ ಮೂವರು ಅಭ್ಯರ್ಥಿಗಳೂ ಜಯ ಸಾಧಿಸುತ್ತಾರೆ. ಅಷ್ಟೇ ಅಲ್ಲ, ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಇನ್ನೂ ಹತ್ತಾರು ಬಾರಿ ಕರ್ನಾಟಕಕ್ಕೆ ಬಂದರೂ, ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ, ಕಾಂಗ್ರೆಸ್ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಸಿದ್ದರಾಮಯ್ಯ ಪುನರುಚ್ಛರಿಸಿದರು.
ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಬುಧವಾರ ಪಕ್ಷದ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಈ ಸಮಿತಿಯ ವರದಿಯನ್ನು ಸ್ಕ್ರೀನಿಂಗ್ ಸಮಿತಿ ಪರಾಮರ್ಶಿಸಿ, ಎಐಸಿಸಿಗೆ ಕಳಿಸುತ್ತದೆ. ಅಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿಕುರಿತಂತೆ ವರಿಷ್ಠರು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ