ಕೋಮುವಾದಿಗಳ ಕುತಂತ್ರಕ್ಕೆ ಹಿಂದುಳಿದ ವರ್ಗಗಳ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಹೇಳುವ ಮೂಲಕ ಸಿಎಂ, ಹಿಂದೂಪರ ಹೋರಾಟಗಾರರ ಹತ್ಯೆಗೆ ತಮ್ಮದೇ ಹೊಸ ವ್ಯಾಖ್ಯಾನ ನೀಡಿದ್ದಾರೆ.

ಬೆಂಗಳೂರು(ಜುಲೈ 24): ಅಹಿಂದ ಅಸ್ತ್ರದ ಮೂಲಕ ಹಿಂದುತ್ವವನ್ನು ಎದುರಿಸಲು ಪಣ ತೊಟ್ಟಿರುವ ಸಿಎಂ ಸಿದ್ದರಾಮಯ್ಯ ಈಗ ಹಿಂದುತ್ವವನ್ನು ಹತ್ತಿಕ್ಕಲು ಮಾಸ್ಟರ್'ಪ್ಲಾನ್ ಮಾಡಿರುವ ಸುಳಿವು ಸಿಕ್ಕಿದೆ. ನಿನ್ನೆಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ನಡೆದ ಪ್ರಗತಿಪರ ಚಿಂತಕರ ಸಂವಾದದಲ್ಲಿ ಸಿದ್ದರಾಮಯ್ಯ ತಮ್ಮ ಹಿಂದುತ್ವ ನಿಗ್ರಹ ಕಾರ್ಯತಂತ್ರವನ್ನು ತೋರ್ಪಡಿಸಿದ್ದಾರೆ. ಹಿಂದುತ್ವ ಮನಸ್ಸಿನ ಸರಕಾರಿ ಅಧಿಕಾರಿಗಳನ್ನ ಗುರುತಿಸಿ ಮಟ್ಟಹಾಕಲು ಸರಕಾರ ಯತ್ನಿಸಲಿದೆ ಎಂದು ಸಿಎಂ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹಿಂದುತ್ವ ಮನಸ್ಸಿನ ಅಧಿಕಾರಿಗಳಿದ್ದಾರೆ. ಸರಕಾರವು ಇದನ್ನ ಸಹಿಸುವುದಿಲ್ಲ. ಇಂತಹ ಅಧಿಕಾರಿಗಳನ್ನು ಗುರುತಿಸಿ ಹತ್ತಿಕ್ಕುವ ಕೆಲಸವನ್ನು ಸರಕಾರ ಮಾಡುತ್ತದೆ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ, ಕೋಮುವಾದಿಗಳ ಕುತಂತ್ರಕ್ಕೆ ಹಿಂದುಳಿದ ವರ್ಗಗಳ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಹೇಳುವ ಮೂಲಕ ಸಿಎಂ, ಹಿಂದೂಪರ ಹೋರಾಟಗಾರರ ಹತ್ಯೆಗೆ ತಮ್ಮದೇ ಹೊಸ ವ್ಯಾಖ್ಯಾನ ನೀಡಿದ್ದಾರೆ.

"ದಕ್ಷಿಣ ಕನ್ನಡ ಜಿಲ್ಲೆಯ ಜನರು ಬಹಳ ಮೃದು ಸ್ವಭಾವದವರು. ಆದರೆ, ಕುತಂತ್ರದ ಮೂಲಕ ಅಲ್ಲಿಯ ಹಿಂದುಳಿದ ವರ್ಗಗಳ ಮಕ್ಕಳನ್ನು ಹಿಂದುತ್ವವಾದಿಗಳು ಸೆಳೆದುಕೊಳ್ಳುತ್ತಿದ್ದಾರೆ. ಬಿಲ್ಲವರು, ಮೀನುಗಾರರ ಮಕ್ಕಳನ್ನು ಹಿಂದುತ್ವದ ಹೆಸರಿನಲ್ಲಿ ಪ್ರಚೋದಿಸಿ ಕೋಮು ಸಂಘರ್ಷ ಹುಟ್ಟುಹಾಕುತ್ತಿದ್ದಾರೆ. ಕೋಮುವಾದಿಗಳ ಚಿತಾವಣೆಯಿಂದ ನಡೆಯುವ ಸಂಘರ್ಷದಲ್ಲಿ ಹಿಂದುಳಿದವರು ಸಾಯುತ್ತಿದ್ದಾರೆ," ಎಂದು ಪ್ರಗತಿಪರ ಚಿಂತಕರ ಚಾವಡಿಯಲ್ಲಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.