ಖೇಣಿಗೆ ಕಾಂಗ್ರೆಸ್’ನಲ್ಲಿ ಸಿಗಲಿದೆಯಾ ಟಿಕೆಟ್..?
ಅಶೋಕ್ ಖೇಣಿ ಅವರ ವಿರುದ್ಧದ ಸದನ ಸಮಿತಿಯ ವರದಿಗೂ ಅವರು ಪಕ್ಷ ಸೇರ್ಪಡೆಗೂ ಯಾವುದೇ ಸಂಬಂಧವಿಲ್ಲ. ಖೇಣಿ ವಿರುದ್ಧ ನೀಡಿರುವ ಸದನ ಸಮಿತಿಯ ವರದಿಯ ಬಗ್ಗೆ ಕಾನೂನು ಇಲಾಖೆಯು ಪರಿಶೀಲನೆ ನಡೆಸುತ್ತಿದ್ದು ಅದು ಯಾವುದೇ ಪ್ರಭಾವಕ್ಕೆ ಒಳಗಾಗದೆ ತನ್ನ ವರದಿ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನವದೆಹಲಿ: ಅಶೋಕ್ ಖೇಣಿ ಅವರ ವಿರುದ್ಧದ ಸದನ ಸಮಿತಿಯ ವರದಿಗೂ ಅವರು ಪಕ್ಷ ಸೇರ್ಪಡೆಗೂ ಯಾವುದೇ ಸಂಬಂಧವಿಲ್ಲ. ಖೇಣಿ ವಿರುದ್ಧ ನೀಡಿರುವ ಸದನ ಸಮಿತಿಯ ವರದಿಯ ಬಗ್ಗೆ ಕಾನೂನು ಇಲಾಖೆಯು ಪರಿಶೀಲನೆ ನಡೆಸುತ್ತಿದ್ದು ಅದು ಯಾವುದೇ ಪ್ರಭಾವಕ್ಕೆ ಒಳಗಾಗದೆ ತನ್ನ ವರದಿ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ದೆಹಲಿಯಲ್ಲಿ ಖೇಣಿ, ನಾಗೇಂದ್ರ, ಆನಂದ್ ಸಿಂಗ್ ಮುಂತಾದ ಕಳಂಕಿತ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಗ್ಗೆ ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಜೈಲಿಗೆ ಹೋಗಿದ್ದರು. ಇದೀಗ ಬಿಜೆಪಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ನಾವು ಆನಂದ್ ಸಿಂಗ್, ನಾಗೇಂದ್ರ, ಖೇಣಿ ಅವರಿಗೆ ಯಾವುದೇ ಭರವಸೆ ನೀಡಿಲ್ಲ. ಅವರು ಬೇಷರತ್ತಾಗಿ ಪಕ್ಷ ಸೇರಿದ್ದಾರೆ ಎಂದು ಸಮರ್ಥಿಸಿಕೊಂಡರು. ಬಳ್ಳಾರಿಗೆ ಅಕ್ರಮ ಗಣಿಗಾರಿಕೆ ವಿರೋಧಿಸಿ ಪಾದಯಾತ್ರೆ ನಡೆಸಿದ ನೀವು ಈಗ ಅಕ್ರಮ ಗಣಿಗಾರಿಕೆಯ ಆರೋಪದಿಂದ ಜೈಲು ಸೇರಿದವರನ್ನೆ ಪಕ್ಷಕ್ಕೆ ಸೇರಿಸಿಕೊಂಡಿದ್ದೀರಿ ಅಲ್ಲವೇ ಎಂದು ಕೇಳಿದ ಪ್ರಶ್ನೆಗೆ, ನಾನು ಜನಾರ್ದನ ರೆಡ್ಡಿಯ ವಿರುದ್ಧ ಪಾದಯಾತ್ರೆ ನಡೆಸಿದ್ದೆ. ಪಕ್ಷ ಹರಿವ ನೀರಿದ್ದಂತೆ, ಪಕ್ಷಕ್ಕೆ ಸೇರುವವರಿಗೆ ಸ್ವಾಗತ ಇರುತ್ತದೆ ಎಂದು ಸಬೂಬು ನೀಡಲು ಮುಂದಾದರು.