ರೈತರೆ ನನಗೆ ಒಂದು ವರ್ಷ ಟೈಂ ಕೊಡಿ : ಸಿಎಂ
ತಾವು ಇನ್ನೊಂದು ವರ್ಷದಲ್ಲಿ ಜಾರಿಗೆ ತರಲು ಹೊರಟಿರುವ ಕೃಷಿ ನೀತಿಯಿಂದ ರೈತರಿಗೆ ಸೂಕ್ತ ಬೆಲೆ ನೀಡಿ ರೈತರನ್ನು ನಷ್ಟದಿಂದ ಪಾರು ಮಾಡಿ ನೆಮ್ಮದಿ ಜೀವನ ಕೊಡುವ ಪರಿಕಲ್ಪನೆ ನನ್ನದಾಗಿದೆ. ನನ್ನ ಎಲ್ಲಾ ಆಲೋಚನೆಗಳು ರೈತರನ್ನು ಸಂಕಷ್ಟದಿಂದ ಪಾರುಮಾಡುವ ಉದ್ದೇಶ ಹೊಂದಿವೆ ಎಂದು ಕರ್ನಾಟಕ ರೈತರಿಗೆ ಸಿಎಂ ಭರವಸೆ ನೀಡಿದ್ದಾರೆ.
ಮಂಡ್ಯ : ‘ರೈತರು ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ. ನಿಮ್ಮ ಎಲ್ಲಾ ಕಷ್ಟಗಳಿಗೆ ಸ್ಪಂದಿಸುತ್ತೇನೆ. ನನಗೆ ಒಂದು ವರ್ಷ ಅವಕಾಶ ಕೊಡಿ, ಸಮಗ್ರ ಕೃಷಿ ನೀತಿ ಜಾರಿಗೊಳಿಸಿ ಸಂಕಷ್ಟದಲ್ಲಿರುವ ರೈತರನ್ನು ಸಂರಕ್ಷಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಭರವಸೆ ನೀಡಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ನಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಅಣೆಕಟ್ಟೆಗೆ ಬಾಗಿನ ಸಮರ್ಪಿಸಿದ ನಂತರ ನಡೆದ ಬಹಿರಂಗ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಯಾವ ಕಾರಣಕ್ಕೂ ಆತ್ಮಹತ್ಯೆ ಯಂತಹ ನಿರ್ಧಾರ ಕೈಗೊಳ್ಳಬಾರದು. ನನಗೆ ಎಷ್ಟೇ ಕಷ್ಟವಾದರೂ ಸಾಲಮನ್ನಾ ಮಾಡಿದ್ದೇನೆ. ಇಷ್ಟಾದರೂ ಅಧೈರ್ಯ ಗೊಂಡು ನಿತ್ಯವೂ ಒಬ್ಬರಲ್ಲ ಒಬ್ಬ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಏಕೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ರೈತರು ಆತ್ಮಹತ್ಯೆ ಮಾಡಿಕೊಂಡ ವಿಷಯ ಮಾಧ್ಯಮದ ಮೂಲಕ ತಿಳಿದಾಕ್ಷಣ ನನಗೆ ಕರಳು ಕಿತ್ತು ಬಂದಂತಾಗುತ್ತದೆ. ಹೃದಯ ಭಾರವಾಗುತ್ತದೆ. ಇನ್ನೊಂದು ವರ್ಷ ಸಮಯಾವ ಕಾಶ ನೀಡಿ ನಿಮ್ಮ ಬದುಕಿನ ಬವಣೆಗಳನ್ನು ದೂರವಾಗಿಸುವ ಜವಾಬ್ದಾರಿ ನನ್ನದು ಎಂದರು. ತಾವು ಇನ್ನೊಂದು ವರ್ಷದಲ್ಲಿ ಜಾರಿಗೆ ತರಲು ಹೊರಟಿರುವ ಕೃಷಿ ನೀತಿಯಿಂದ ರೈತರಿಗೆ ಸೂಕ್ತ ಬೆಲೆ ನೀಡಿ ರೈತರನ್ನು ನಷ್ಟದಿಂದ ಪಾರು ಮಾಡಿ ನೆಮ್ಮದಿ ಜೀವನ ಕೊಡುವ ಪರಿಕಲ್ಪನೆ ನನ್ನದಾಗಿದೆ. ನನ್ನ ಎಲ್ಲಾ ಆಲೋಚನೆಗಳು ರೈತರನ್ನು ಸಂಕಷ್ಟದಿಂದ ಪಾರುಮಾಡುವ ಉದ್ದೇಶ ಹೊಂದಿವೆ. ಅದಕ್ಕಾಗಿ ನಾನು ಹೆಣಗಾಡುತ್ತಿದ್ದೇನೆ. ಯಾರ ಮಾತನ್ನು ನಂಬಬೇಡಿ ಎಂದರು.
ಜಾತಿ ಸಾಲ ಮನ್ನಾ ಅಲ್ಲ: ಸಮಗ್ರ ಕರ್ನಾಟಕದ ದೃಷ್ಟಿಕೋನ ಇಟ್ಟುಕೊಂಡು ಸಾಲಮನ್ನಾ ಮಾಡಲಾಗಿದೆ. ಯಾವುದೇ ಪ್ರಾಂತ್ಯ, ಜಾತಿಗೆ ಇದು ಸೀಮಿತವಲ್ಲ ಎಂದು ಹೇಳಿದರು. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸಣ್ಣನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿದರು. ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಇದ್ದರು.