ಬಂದ್ ನಂತರ ಹೊರಬಿದ್ದ ಶುಭಸುದ್ಧಿ, ರಾಜ್ಯದಲ್ಲಿ ಪೆಟ್ರೋಲ್ ಅಗ್ಗ?
ಕೇಂದ್ರ ಸರಕಾರದ ವಿರುದ್ಧ ಬಂದ್ ಮಾಡಿದದ್ದರೆ ಇತ್ತ ತೈಲ ದರ ಇಳಿಕೆ ಸಂಬಂಧ ರಾಜ್ಯ ಸರಕಾರ ಶುಭ ಸುದ್ದಿ ನೀಡುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಇಳಿಕೆಯಾಗುವ ಸಾಧ್ಯತೆಯಿದೆ. ಅಧಿಕೃತವಾಗಿ ಘೋಷಣೆಯಾಗದೇ ಇದ್ದರೂ ಸೆಸ್ ಇಳಿಸುವ ಸಂಬಂಧ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂಬುದು ಸಿಎಂ ಕುಮಾರಸ್ವಾಮಿ ಅವರ ಮಾತಿನಿಂದ ವ್ಯಕ್ತವಾಗಿದೆ.
ನವದೆಹಲಿ[ಸೆ.10] ಪ್ರಧಾನಿ ಮೋದಿ ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಕುಮಾರಸ್ವಾಮಿ ರಾಜ್ಯ ಸರ್ಕಾರದಿಂದ ಸೆಸ್ ಕಡಿಮೆ ಮಾಡುವ ಚಿಂತನೆ ಇದ್ದು ಆರ್ಥಿಕ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿಕೊಂಡರೆ ನಮ್ಮಲ್ಲಿ ಪೆಟ್ರೋಲ್ ದರ ಕಡಿಮೆಯಿದೆ. ಕೇಂದ್ರ ಸರ್ಕಾರದ ತೈಲ ನೀತಿಗಳ ಬದಲಾವಣೆಯಿಂದಾಗಿ ದರ ಏರಿಕೆಯಾಗಿದೆ ಎಂಬ ಅಂಶವನ್ನು ಪುನರುಚ್ಛಾರ ಮಾಡಿದರು.
ರೈತರ ಸಾಲಮನ್ನಾ ಮಾಡಲು ಕುಮಾರಸ್ವಾಮಿ ಸರ್ಕಾರ ಪೆಟ್ರೋಲ್ ಮೇಲಿನ ತೆರಿಗೆಯನ್ನು 30% ರಿಂದ 32% ಗೆ ಏರಿಕೆ ಮಾಡಿದೆ. ಹಾಗೆಯೇ ಡೀಸೆಲ್ ಮೇಲಿನ ತೆರಿಗೆಯನ್ನು 19% ನಿಂದ 21% ಗೆ ಏರಿಕೆ ಮಾಡಿತ್ತು. ಸಂಪೂರ್ಣ ದರದ ಮೇಲೆ ಸೆಸ್ ಏರಿಕೆ ಮಾಡಿದ್ದು ಗ್ರಾಹಕರ ಜೇಬಿಗೆ ದೊಡ್ಡ ಕತ್ತರಿ ಹಾಕಿತ್ತು. ರಾಜಸ್ಥಾನ ಸರಕಾರದ ಇಳಿಕೆ ಕ್ರಮವನ್ನು ರಾಜ್ಯ ಸರಕಾರವೂ ಮಾಡಲಿದೆಯೇ ಕಾದು ನೋಡಬೇಕಿದೆ?