ನಾಳೆ ಎಚ್ಡಿಕೆ ದಿಲ್ಲಿಗೆ | ಸಾಲ ಮನ್ನಾ ಸುಗ್ರೀವಾಜ್ಞೆ ಬಗ್ಗೆ ರಾಷ್ಟ್ರಪತಿಗೆ ಮೊರೆ | ಋುಣಪರಿಹಾರ ಅಧಿನಿಯಮ ವಿಧೇಯಕಕ್ಕೆ ಅಂಕಿತ ಹಾಕುವಂತೆ ರಾಷ್ಟ್ರಪತಿಗೆ ಮನವಿ
ಬೆಂಗಳೂರು (ಆ. 29): ಕೊಡಗು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಿಂದ ಭಾರೀ ಆಸ್ತಿಪಾಸ್ತಿ ಹಾನಿಯಾಗಿರುವ ಹಿನ್ನೆಲೆಯಲ್ಲಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುರುವಾರ ದೆಹಲಿಗೆ ತೆರಳಲಿದ್ದಾರೆ.
ದೆಹಲಿ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಗೂ ಮುಖ್ಯಮಂತ್ರಿ ಉದ್ದೇಶಿಸಿದ್ದು, ಈವರೆಗೂ ಸಮಯ ನಿಗದಿಯಾಗಿಲ್ಲ. ಆದರೆ, ಮಧ್ಯಾಹ್ನ 1 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭೇಟಿಗೆ ಸಮಯ ನಿಗದಿಯಾಗಿದ್ದು ಈ ವೇಳೆ ಋುಣಪರಿಹಾರ ಅಧಿನಿಯಮ ವಿಧೇಯಕಕ್ಕೆ ಅಂಕಿತ ಹಾಕುವಂತೆ ಮುಖ್ಯಮಂತ್ರಿ ಮನವಿ ಸಲ್ಲಿಸಲಿದ್ದಾರೆ.
ಗುರುವಾರ ದಿನವಿಡೀ ದೆಹಲಿಯಲ್ಲೇ ಕಳೆಯಲಿರುವ ಕುಮಾರಸ್ವಾಮಿ ಕೇಂದ್ರದ ಹಲವು ಸಚಿವರನ್ನೂ ಭೇಟಿಯಾಗಿ ಕೊಡಗು ಸೇರಿದಂತೆ ರಾಜ್ಯಾದ್ಯಂತ ಪ್ರಾಕೃತಿಕ ವಿಕೋಪದಲ್ಲಿ ಆದ ಹಾನಿ ಹಿನ್ನೆಲೆಯಲ್ಲಿ ಕೇಂದ್ರದ ನೆರವು ಕೋರಲಿದ್ದಾರೆ. ಜತೆಗೆ, ರಾಜ್ಯದಲ್ಲಿ ಮಳೆಯಿಲ್ಲದೆ ಬೆಳೆನಷ್ಟಕ್ಕೆ ತುತ್ತಾಗಿರುವ ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸುವಂತೆಯೂ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.
