ಕೇಂದ್ರ ರಾಜ್ಯಗಳ ಅಭಿಪ್ರಾಯ ಪಡೆಯುತ್ತಿಲ್ಲ: ಪ್ರಿಯಾಂಕ್ ಖರ್ಗೆ
ಆಡಳಿತ ನೀತಿಯ ವಿಷಯಗಳಲ್ಲಿ ಕೇಂದ್ರ ರಾಜ್ಯಗಳೊಂದಿಗೆ ಸೂಕ್ತ ಸಹಯೋಗ ನೀಡುತ್ತಿಲ್ಲ ಎಂದು ಕರ್ನಾಟಕ ಜೈವಿಕ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಆಪಾದಿಸಿದ್ದಾರೆ. ಇಂಟರ್ನೆಟ್ ಆಡಳಿತ, ದತ್ತಾಂಶ ಸಂರಕ್ಷಣೆ ಮತ್ತು ಖಾಸಗಿತನ ಮುಂತಾದ ಪ್ರಮುಖ ವಿಷಯಗಳಲ್ಲಿ ಕೇಂದ್ರ ಸರ್ಕಾರ, ರಾಜ್ಯಗಳನ್ನು ಸಂಪರ್ಕಿಸಿಲ್ಲ ಎಂದು ಅವರು ಹೇಳಿದ್ದಾರೆ.
ನವದೆಹಲಿ: ಆಡಳಿತ ನೀತಿಯ ವಿಷಯಗಳಲ್ಲಿ ಕೇಂದ್ರ ರಾಜ್ಯಗಳೊಂದಿಗೆ ಸೂಕ್ತ ಸಹಯೋಗ ನೀಡುತ್ತಿಲ್ಲ ಎಂದು ಕರ್ನಾಟಕ ಜೈವಿಕ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಆಪಾದಿಸಿದ್ದಾರೆ.
ಇಂಟರ್ನೆಟ್ ಆಡಳಿತ, ದತ್ತಾಂಶ ಸಂರಕ್ಷಣೆ ಮತ್ತು ಖಾಸಗಿತನ ಮುಂತಾದ ಪ್ರಮುಖ ವಿಷಯಗಳಲ್ಲಿ ಕೇಂದ್ರ ಸರ್ಕಾರ, ರಾಜ್ಯಗಳನ್ನು ಸಂಪರ್ಕಿಸಿಲ್ಲ ಎಂದು ಅವರು ಹೇಳಿದ್ದಾರೆ.
‘ಪ್ರತಿ ರಾಜ್ಯವೂ ತನ್ನದೇ ಅಭಿಪ್ರಾಯ ಹೊಂದಿರುತ್ತದೆ, ರಾಷ್ಟ್ರೀಯ ನೀತಿ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಕೇಂದ್ರವು ರಾಷ್ಟ್ರೀಯ ನೀತಿಯನ್ನು ಒಂದು ರಾಜ್ಯಕ್ಕೆ ಸೀಮಿತಗೊಳಿಸುವಂತಿಲ್ಲ. ಯಾಕೆಂದರೆ, ಅದು ರಾಷ್ಟ್ರೀಯ ನೀತಿ’ ಎಂದು ಖರ್ಗೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ನೀತಿಗಳನ್ನು ರೂಪಿಸುವಾಗ, ಎಲ್ಲ ರಾಜ್ಯಗಳ ಸಂಪೂರ್ಣ ಅಭಿಪ್ರಾಯ ಪಡೆಯುವುದು ಉತ್ತಮ, ಅದರಲ್ಲೂ ಇ-ಆಡಳಿತ ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದಂತಹ ರಾಜ್ಯಗಳ ಅಭಿಪ್ರಾಯ ಪಡೆಯುವುದು ಅತ್ಯಂತ ಮುಖ್ಯವಾದುದು ಎಂದು ಅವರು ಹೇಳಿದ್ದಾರೆ.
ನ.16-18ರಂದು ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ ಸಂಬಂಧಿಸಿ ರೋಡ್ ಶೋನಲ್ಲಿ ಭಾಗವಹಿಸಲು ಖರ್ಗೆ ಇಲ್ಲಿಗೆ ಆಗಮಿಸಿದ್ದರು.