ಎಂ.ಬಿ.ಪಾಟೀಲ್'ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ?
- ಎಂ.ಬಿ. ಪಾಟೀಲರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಾಧ್ಯತೆ
- ದೆಹಲಿಗೆ ದೌಡಾಯಿಸಿದ ಪಾಟೀಲ್ ಹಾಗೂ ದಿನೇಶ್ ಗುಂಡೂರಾವ್
- ದೆಹಲಿ ನಾಯಕರ ಒಲವು ಪಾಟೀಲರ ಮೇಲೆ ಹೆಚ್ಚು
ಬೆಂಗಳೂರು(ಜೂ.09): ಸಚಿವ ಸ್ಥಾನ ಸಿಗದೆ ಮುನಿಸಿಕೊಂಡು ಕೆಂಡಾಮಂಡಲವಾಗಿರುವ ಶಾಸಕ ಎಂ.ಬಿ. ಪಾಟೀಲ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಾಧ್ಯತೆಯಿದೆ.
ಕಾಂಗ್ರೆಸ್ ಹೈಕಮಾಂಡ್ ತುರ್ತಾಗಿ ಅತೃಪ್ತ ಶಾಸಕ ಎಂ.ಬಿ. ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ದೆಹಲಿಗೆ ಕರೆಸಿಕೊಂಡಿದೆ. ಈ ಮೊದಲು ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಅವರ ಹೆಸರನ್ನು ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಪ್ರಸ್ತಾಪ ಮಾಡಿದ್ದರು. ಇದಕ್ಕಾಗಿಯೇ ದಿನೇಶ್ ಗುಂಡೂರಾವ್ ಹೆಸರನ್ನು ಸಂಪುಟ ಸೇರುವವರ ಪಟ್ಟಿಯಿಂದ ಕೈಬಿಡಲಾಗಿತ್ತು.
ಎಂ.ಬಿ.ಪಾಟೀಲ್ ಕಡೆ ದೆಹಲಿ ನಾಯಕರ ಒಲವು
ಸಿದ್ದರಾಮಯ್ಯ ಹಾಗೂ ಪರಮೇಶ್ವರ ಸಲಹೆಗೆ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯದ ಹಿರಿಯ ನಾಯಕರು, ದಿನೇಶ್ ಗುಂಡೂರಾವ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದರೆ ರಾಜ್ಯದ ಎಲ್ಲ ನಾಯಕರನ್ನು ಹೊಂದಿಸಿಕೊಂಡು ಪಕ್ಷವನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಎಂ.ಬಿ. ಪಾಟೀಲರನ್ನು ಕೂರಿಸಿದರೆ ಲಿಂಗಾಯತ ಸಮುದಾಯವನ್ನು ಸಮಾಧಾನ ಪಡಿಸುವುದರ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುವ ಸಾಧ್ಯತೆಯಿದೆ ಎಂದು ಹೈಕಮಾಂಡ್'ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.