ಕಾವೇರಿ: ಇಂದಿನ ಕೇಂದ್ರದ ಮಧ್ಯಸ್ಥಿಕೆ ಸಭೆಯಲ್ಲಿ ಏನಾಗಬಹುದು?
ನವದೆಹಲಿ(ಸೆ. 29): ಸುಪ್ರೀಂಕೋರ್ಟ್ ಸೂಚನೆಯಂತೆ ಕೇಂದ್ರ ಸರ್ಕಾರ ಕಾವೇರಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದೆ. ಇಂದು ರಾಜಧಾನಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವ ಉಮಾಭಾರತಿ ಕರೆದಿರುವ ಉಭಯ ರಾಜ್ಯಗಳ ಮುಖ್ಯಮಂತ್ರಿ ಸಭೆ ಬೆಳಗ್ಗೆ 11:30ಕ್ಕೆ ಆರಂಭಗೊಳ್ಳಲಿದೆ. ಸಿಎಂ ಸಿದ್ದರಾಮಯ್ಯ, ನೀರಾವರಿ ಸಚಿವ ಎಂ.ಬಿ.ಪಾಟೀಲ್ ಇಂದು ಬೆಳಗ್ಗೆ ಗಂಟೆಗೆ ಡೆಲ್ಲಿಯತ್ತ ಆಗಮಿಸಿದ್ದಾರೆ. ಇನ್ನೊಂದೆಡೆ, ಅನಾರೋಗ್ಯದ ಕಾರಣ ತಮಿಳುನಾಡು ಸಿಎಂ ಜಯಲಲಿತಾ ಈ ಹೈವೋಲ್ಟೇಜ್ ಮೀಟಿಂಗ್'ನ್ನು ಅಟೆಂಡ್ ಮಾಡುತ್ತಿಲ್ಲ. ಬದಲಾಗಿ ಹಾಲಿ ಲೋಕೋಪಯೋಗಿ ಸಚಿವ ಪಳನಿಸ್ವಾ ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಬಿಜೆಪಿ ಗಂಭೀರ:
ಇನ್ನೊಂದು ಕಡೆ ಬಿಜೆಪಿ ನಿಯೋಗ ಕೂಡ ದಿಲ್ಲಿಯಲ್ಲಿ ಬೀಡುಬಿಟ್ಟು ಸಮಸ್ಯೆ ಬಗೆಹರಿಸಲು ಹೆಣಗಾಡುತ್ತಿದೆ. ಎರಡೂ ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸುವಂತೆ ಸೂಚಿಸಿರುವುದಾಗಿ ಬಿಎಸ್ ಯಡಿಯೂರಪ್ಪ ಹೇಳುತ್ತಿದ್ದಾರೆ. ಈ ಕಾರಣಕ್ಕೆ ಬಿಜೆಪಿ ಕೂಡ ಕಾವೇರಿ ವಿಚಾರದ ಗಂಭೀರತೆಯನ್ನು ಅರ್ಥ ಮಾಡಿಕೊಂಡಿದೆ. ಒಂದು ವೇಳೆ, ಉಭಯ ರಾಜ್ಯಗಳಿಗೂ ತಜ್ಞರ ಸಮಿತಿ ಕಳುಹಿಸಿ ವಸ್ತುಸ್ಥಿತಿ ಅಧ್ಯಯನಕ್ಕೆ ಕೇಂದ್ರ ಸರ್ಕಾರ ಸೂಚಿಸಿದರೆ ಕರ್ನಾಟಕದ ಪಾಲಿಗೆ ನಿಜಕ್ಕೂ ಗಂಡಾತರದಿಂದ ಪಾರಾದ ಸಂಭ್ರಮವೇ ಸರಿ.
ಇಂದು ಏನಾಗಬಹುದು?
- ಕರ್ನಾಟಕ ಕೋರ್ಟ್ ಆದೇಶ ಪಾಲಿಸಿಲ್ಲವೆಂದು ತಮಿಳುನಾಡು ಸಭೆ ಬಹಿಷ್ಕರಿಸಬಹುದು
- ಕೇಂದ್ರ ವ್ಯತಿರಿಕ್ತ ಆದೇಶ ಕೊಟ್ಟಲ್ಲಿ ಯಾವುದಾದರೂ ಒಂದು ರಾಜ್ಯ ತೀರ್ಮಾನವನ್ನು ಒಪ್ಪದಿರಬಹುದು
- ಎರಡೂ ರಾಜ್ಯಗಳು ಸಭೆಯ ತೀರ್ಮಾನವನ್ನು ವಿರೋಧಿಸಬಹುದು
- ಎರಡು ರಾಜ್ಯಗಳ ನಡುವೆ ಸಮ್ಮತಿ ಸಾಧ್ಯವಿಲ್ಲವೆಂದು ಇಂದೇ ತೀರ್ಮಾನ ಪ್ರಕಟಿಸದಿರಬಹುದು
- ಎರಡು ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನವನ್ನು ಸುಪ್ರೀಂಕೋರ್ಟ್'ನಲ್ಲೇ ಹೇಳಬಹುದು
- ಸಭೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಿಗೂ ಅಧ್ಯಯನ ತಂಡ ಕಳಿಸಬಹುದು
ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಸಭೆಯಲ್ಲಿ ತೆಗೆದುಕೊಳ್ಳುವ ಯಾವುದೇ ತೀರ್ಮಾನವನ್ನೂ ತಮಿಳ್ನಾಡು ಸರ್ಕಾರ ಒಪ್ಪದಿರುವ ಸಂಭವವೇ ಜಾಸ್ತಿ ಇದೆ ಎಂದು ಹೇಳಲಾಗುತ್ತಿದೆ. ನಾಳೆ ಸುಪ್ರೀಂಕೋರ್ಟ್'ನ ದ್ವಿಸದಸ್ಯ ಪೀಠದ ಮುಂದೆಯೇ ವಿಚಾರಣೆ ನಡೆಯಲಿದೆ. ಶುಕ್ರವಾರದ ಈ ವಿಚಾರಣೆ ಕೂಡ ತೀವ್ರ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ, ಕಾವೇರಿ ವಿವಾದದ ಚೆಂಡು ಕೇಂದ್ರ ಸರ್ಕಾರದ ಅಂಗಳದಲ್ಲಿದ್ದು ಏನಾಗುತ್ತೆ ಅನ್ನೋದು ಇವತ್ತು ಮಧ್ಯಾಹ್ನ ಅಥವಾ ಸಂಜೆ ಹೊತ್ತಿಗೆ ಸ್ಪಷ್ಟವಾಗಲಿದೆ.
ಬ್ಯೂರೋ ರಿಪೋರ್ಟ್, ಸುವರ್ಣ ನ್ಯೂಸ್