ರೈತರಿಗೆ ರುಪೇ(Rupay) ಕಿಸಾನ್ ಕಾರ್ಡ್ ವಿತರಣೆ. ಇದರ ಮೂಲಕ ರೈತರು ಇ-ಪಾವತಿ ಮಾಡಬಹುದಾಗಿದೆ.
ನವದೆಹಲಿ(ಡಿ. 08): ನಗದುರಹಿತ ವಹಿವಾಟಿಗೆ ಉತ್ತೇಜನ ನೀಡಲು ಹಣಕಾಸು ಸಚಿವರು ಹಲವು ರೀತಿಯ ಕ್ರಮಗಳನ್ನು ಘೋಷಿಸಿದ್ದಾರೆ. ಆನ್'ಲೈನ್'ನಲ್ಲಿ ಬುಕ್ ಮಾಡುವ ರೈಲ್ವೆ ಟಿಕೆಟ್'ಗಳಿಗೆ 10 ಲಕ್ಷ ರೂ. ಇನ್ಷೂರೆನ್ಸ್, ಪೆಟ್ರೋಲ್'ನ್ನು ಕಾರ್ಡ್ ಮೂಲಕ ಕೊಂಡರೆ ಬೆಲೆಯಲ್ಲಿ ರಿಯಾಯಿತಿ ಇತ್ಯಾದಿ ಹಲವು ಆಫರ್'ಗಳನ್ನು ಸರಕಾರ ಮುಂದೊಡ್ಡಿದೆ.
ನೋಟ್ ನಿಷೇಧ ಜಾರಿಗೆ ಬಂದು ಒಂದು ತಿಂಗಳಾಗಿರುವ ಹಿನ್ನೆಲೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ, ಈ ಒಂದು ತಿಂಗಳಲ್ಲಿ ದೇಶದಲ್ಲಿ ಇ-ಪೇಮೆಂಟ್ ಸಾಕಷ್ಟು ವೃದ್ಧಿಯಾಗಿದೆ. ಆನ್'ಲೈನ್ ಮೂಲಕ ಪಾವತಿ ಮಾಡುವ ಪ್ರಮಾಣ ದ್ವಿಗುಣಗೊಂಡಿದೆ ಎಂದು ಜೇಟ್ಲಿ ತಿಳಿಸಿದ್ದಾರೆ. ದೇಶದಲ್ಲಿ ನಗದು ರಹಿತ ವಹಿವಾಟಿನ ಪ್ರಮಾಣವನ್ನು ಹೆಚ್ಚಿಸಲು ಜೇಟ್ಲಿ ಈ ಸಂದರ್ಭದಲ್ಲಿ ನೀಡಿದ ಪ್ರಮುಖ ಆಫರ್'ಗಳು ಈ ಕೆಳಕಂಡಂತಿವೆ.
1) ಇ-ಪೇಮೆಂಟ್ ಮೂಲಕ ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸಿದರೆ ಶೇ. 0.75ರಷ್ಟು ಡಿಸ್ಕೌಂಟ್ ಇರಲಿದೆ.
2) 10 ಲಕ್ಷ ಜನಸಂಖ್ಯೆ ಇರುವ ಸುಮಾರು 1 ಲಕ್ಷ ಹಳ್ಳಿಗಳಲ್ಲಿ ಎರಡು ಪಿಓಎಸ್(ಪಾಯಿಂಟ್ ಆಫ್ ಸೇಲ್) ಮೆಷೀನ್'ಗಳ ಸ್ಥಾಪನೆ.
3) ರೈತರಿಗೆ ರುಪೇ(Rupay) ಕಿಸಾನ್ ಕಾರ್ಡ್ ವಿತರಣೆ. ಇದರ ಮೂಲಕ ರೈತರು ಇ-ಪಾವತಿ ಮಾಡಬಹುದಾಗಿದೆ.
4) ಜನವರಿ 1ರಿಂದ ಇ-ಪಾವತಿ ಮೂಲಕ ಸಬರ್ಬನ್ ರೈಲ್ವೆಯ ಮಾಸಿಕ ಪಾಸ್'ಗಳನ್ನು ಕೊಂಡರೆ ಶೇ. 0.5ರಷ್ಟು ರಿಯಾಯಿತಿ ಸಿಗುತ್ತದೆ.
5) ಆನ್'ಲೈನ್'ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಿದರೆ 10 ಲಕ್ಷ ರೂಪಾಯಿ ಇನ್ಷೂರೆನ್ಸ್ ಸಿಗುತ್ತದೆ.
6) ಟೋಲ್ ಬೂಥ್'ಗಳಲ್ಲಿ ಸ್ಮಾರ್ಟ್'ಕಾರ್ಡ್ ಉಪಯೋಗಿಸಿದರೆ 10 ಪ್ರತಿಶತ ರಿಯಾಯಿತಿ.
7) ರೈಲ್ವೆ ತಿಂಡಿ, ವಸತಿ, ವಿಶ್ರಾಂತಿ ಕೊಠಡಿಗಳ ಸೇವೆಗೆ ಆನ್'ಲೈನ್'ನಲ್ಲಿ ಪಾವತಿ ಮಾಡಿದರೆ ಶೇ. 5 ಡಿಸ್ಕೌಂಟ್.
8) ಇನ್ಷೂರೆನ್ಸ್ ಸಂಸ್ಥೆ(ಎಲ್'ಐಸಿ ಇತ್ಯಾದಿ ಸರಕಾರಿ ಉದ್ದಿಮೆಗಳು)ಗಳ ವೆಬ್'ಸೈಟ್'ಗಳ ಮೂಲಕ ಇನ್ಷೂರೆನ್ಸ್ ಪಾಲಿಸಿಯನ್ನು ಆನ್'ಲೈನ್'ನಲ್ಲಿ ಖರೀದಿಸಿದರೆ ಶೇ.10ರಷ್ಟು ರಿಯಾಯಿತಿ ಇರುತ್ತದೆ. ಆನ್'ಲೈನ್'ನಲ್ಲಿ ಪ್ರೀಮಿಯಮ್ ಪಾವತಿ ಮಾಡಿದರೂ ಶೇ.8ರಷ್ಟು ಡಿಸ್ಕೌಂಟ್ ಸಿಗುತ್ತದೆ.
9) ಸರಕಾರಿ ಇಲಾಖೆಗಳಲ್ಲಿ ಮತ್ತು ಸಂಸ್ಥೆಗಳಲ್ಲಿ ಸಾರ್ವಜನಿಕರೊಂದಿಗೆ ವ್ಯವಹರಿಸುವಾಗ ವಹಿವಾಟು ಶುಲ್ಕ(Transaction Fee) ಮತ್ತು ಎಂಡಿಆರ್ ದರ (ಬ್ಯಾಂಕ್'ನವರು ಸಂಸ್ಥೆಗೆ ವಿಧಿಸುವ ದರ)ವನ್ನು ಗ್ರಾಹಕರ ತಲೆಯ ಮೇಲೆ ಹೇರಬಾರದು.
10) ಎರಡು ಸಾವಿರ ರೂ.ವರೆಗಿನ ಆನ್'ಲೈನ್ ವಹಿವಾಟಿಗೆ ಸೇವಾ ತೆರಿಗೆ ಇರುವುದಿಲ್ಲ.
