ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರಿಗೆ ಬಂಧನದ ಭೀತಿ ಎದುರಾಗಿದೆ. ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಅವಕಾಶ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ನಲ್ಲಿ ಸಿಬಿಐ ಪ್ರಬಲವಾಗಿ ವಾದ ಮಂಡಿಸಿದೆ.

ನವದೆಹಲಿ :  ಐಎನ್‌ಎಕ್ಸ್‌ ಮೀಡಿಯಾ ಹಗರಣ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರಿಗೆ ಬಂಧನದ ಭೀತಿ ಸೃಷ್ಟಿಸಿದೆ. ಈ ಪ್ರಕರಣ ಕುರಿತು ಪ್ರಶ್ನೆಗಳನ್ನು ಕೇಳಿದರೆ ಚಿದಂಬರಂ ಅವರು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ವಿಚಾರಣೆ ವೇಳೆ ಸಹಕರಿಸುತ್ತಿಲ್ಲ. ಹೀಗಾಗಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಅವಕಾಶ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ನಲ್ಲಿ ಸಿಬಿಐ ಪ್ರಬಲವಾಗಿ ವಾದ ಮಂಡಿಸಿದೆ.

Add Asianetnews Kannada as a Preferred SourcegooglePreferred

ಈ ಅರ್ಜಿಯ ವಿಚಾರಣೆಯನ್ನು ಆ.1ರವರೆಗೂ ಮುಂದೂಡಿರುವ ನ್ಯಾಯಮೂರ್ತಿ ಎ.ಕೆ. ಪಾಠಕ್‌ ಅವರು, ಬಂಧನದಿಂದ ಚಿದಂಬರಂ ಅವರಿಗೆ ನೀಡಿರುವ ರಕ್ಷಣೆಯನ್ನು ಅಲ್ಲಿವರೆಗೂ ವಿಸ್ತರಿಸಲಾಗಿದೆ ಎಂದು ಪ್ರಕಟಿಸಿದ್ದಾರೆ. ಹೀಗಾಗಿ ಸದ್ಯಕ್ಕೆ ಚಿದಂಬರಂ ಪಾರಾಗಿದ್ಧಾರೆ.

ಚಿದಂಬರಂ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಸಮರ್ಪಕ ಹಾಗೂ ತೃಪ್ತಿದಾಯಕ ದಾಖಲೆಗಳು ಲಭ್ಯ ಇವೆ. ಅದರ ಆಧಾರದಲ್ಲಿ ಮಾಜಿ ಸಚಿವರನ್ನು ಪ್ರಶ್ನೆ ಮಾಡಿದರೆ ನುಣುಚಿಕೊಳ್ಳುತ್ತಿದ್ದಾರೆ. ತನಿಖಾ ಸಂಸ್ಥೆಗೆ ಸಹಕಾರ ಮಾಡುತ್ತಿಲ್ಲ. ಇಲ್ಲಿವರೆಗೂ ಸಂಗ್ರಹಿಸಿರುವ ದಾಖಲೆಗಳು, ಪ್ರಕರಣದ ಗಂಭೀರತೆಯಿಂದ ಅವರನ್ನು ಕಸ್ಟಡಿಯಲ್ಲಿಟ್ಟು ವಿಚಾರಣೆ ನಡೆಸಬೇಕಾದ ಅವಶ್ಯಕತೆ ಇದೆ. ಆ ರೀತಿ ಮಾಡದೇ ಇದ್ದಲ್ಲಿ ಅವರ ವಿರುದ್ಧದ ಆರೋಪ ಕುರಿತು ಸತ್ಯ ಭೇದಿಸಲು ಆಗುವುದಿಲ್ಲ. ಹೀಗಾಗಿ ಚಿದಂಬರಂಗೆ ನಿರೀಕ್ಷಣಾ ಜಾಮೀನು ರದ್ದುಗೊಳಿಸಬೇಕು ಎಂದು ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಅಫಿಡವಿಟ್‌ ಸಲ್ಲಿಸಿದ್ದಾರೆ.

ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯ ಅನುಮತಿಯನ್ನು ಐಎನ್‌ಎಕ್ಸ್‌ ಮೀಡಿಯಾಗೆ ನೀಡಲಾಗಿತ್ತು. 305 ಕೋಟಿ ರು.ನ ಈ ವ್ಯವಹಾರದಲ್ಲಿ ಅಕ್ರಮಗಳು ಪತ್ತೆಯಾಗಿದ್ದವು. ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.