ಕಾವೇರಿ ಗಲಾಟೆ: ಬೆಂಕಿ ಹಚ್ಚುವ ಯುವಕರಿಗೆ ಫೇಸ್'ಬುಕ್'ನಲ್ಲಿ ಎಚ್ಚರಿಕೆ ಕೊಟ್ಟ ಬೆಂಗಳೂರು ನಗರ ಪೊಲೀಸರು
ಬೆಂಗಳೂರು(ಸೆ.13): ನಿನ್ನೆ ನಡೆದ ಕಾವೇರಿ ಗಲಾಟೆಯಲ್ಲಿ ಪ್ರತಿಭಟನಾನಿತರು ತಮಿಳುನಾಡು ಲಾರಿಗಳಿಗೆ ಬೆಂಕಿ ಹಚ್ಚುವುದಲ್ಲದೇ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಸಾಕಷ್ಟು ನಷ್ಟ ಉಂಟು ಮಾಡಿದ್ದರು. ಬೆಂಗಳೂರಿನಲ್ಲಿ ಸುಮಾರು 25ರಿಂದ 30 ಲಾರಿಗಳು ಬೆಂಕಿಗಾಹುತಿಯಾಗಿವೆ. ಇದಲ್ಲದೆ, ಕೆಪಿಎನ್ ಟ್ರಾವೆಲ್ಸ್ ಸೇರಿದ 35ಕ್ಕೂ ಹೆಚ್ಚು ಬಸ್ ಗಳು ಭಸ್ಮವಾಗಿತ್ತು.
ಪೊಲೀಸರು ಎಷ್ಟೇ ಹರಸಾಹಸ ಪಟ್ಟರೂ ಪರಿಸ್ಥಿತಿಯನ್ನು ಹತೋಟಿಗೆ ತರಲು ಹೈರಾಣವಾಗಿ ಹೋಗಿದ್ದರು.ಈ ಎಲ್ಲಾ ಗಲಾಟೆಯಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದನ್ನು ಗಮನಿಸಿರುವ ಪೊಲೀಸರು ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಬೆಂಕಿ ಹಚ್ಚುವ ಯುವಕರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
"ಬೆಂಕಿ ಹಚ್ಚುವ ಯುವಕರೇ ಎಚ್ಚರ!! ನಿಮ್ಮ ಭವಿಷ್ಯ ಹಾಳು ಮಾಡಕೊಳ್ಳಬೇಡಿ!!! ಭಾವ್ವೊದ್ವೇಗಕ್ಕೆ ಒಳಗಾಗಿ ಕಾನೂನನ್ನು ಕೈಗೆ ತೆಗೆದು ಕೊಳ್ಳಬೇಡಿ, ನಿಮ್ಮ ಉಜ್ವಲ ಭವಿಷ್ಯ ನಿಮ್ಮ ಕೈಯ್ಯಾರೆ ಹಾಳು ಮಾಡಿಕೊಳ್ಳುವಿರಿ!!! ಬೆಂಕಿ ಹಚ್ಚುವ ಯುವಕರೇ ಎಚ್ಚರ. ನೀವು ಬೆಂಕಿ ಹಚ್ಚುವ ವಿಡಿಯೋಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಹತ್ತಿರದಲ್ಲಿ ಸಿಸಿ ಕ್ಯಾಮರಾಗಳಿದ್ದರೆ ಅಲ್ಲಿಯೂ ರೆಕಾರ್ಡ್ ಆಗಿರುತ್ತದೆ. ಇದನ್ನೆಲ್ಲ ಪೋಲಿಸರು ವಶ ಪಡೆದುಕೊಂಡು ಪ್ರಕರಣ ದಾಖಲಿಸಿ ಕೇಸು ದಾಖಲಿಸುತ್ತಾರೆ.
ನಿಮ್ಮನ್ನು ಹುಡುಕಿ ಬಂಧಿಸುತ್ತಾರೆ. ಸಾಕಷ್ಟು ದಿನ ಜಾಮೀನು ಸಿಗುವುದಿಲ್ಲ.ಕೊನೆಗೆ ಹಲವು ವರ್ಷ ನ್ಯಾಯಲಯಕ್ಕೆ ಅಲೆಯಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಹಣ ಹಾಳಾಗುತ್ತದೆ. ಪೋಲಿಸ್ ಇಲಾಖೆಯಲ್ಲಿ ನಿಮ್ಮ ಪೈಲ್ ತೆರೆಯುತ್ತಾರೆ.ಈ ಚಕ್ರವ್ಯೂಹದಿಂದ ಹೊರಬರಲು ಪ್ರಯಾಸಪಡಬೇಕಾಗುತ್ತದೆ.
ಇದರಿಂದ ನಿಮ್ಮ ಪೋಷಕರು ತೊಂದರೆ ಅನುಭವಿಸುತ್ತಾರೆ.ನಿಮ್ಮ ಭವಿಷ್ಯಕ್ಕೂ ತೊಂದರೆಯಾಗುತ್ತದೆ. ಆದ್ದರಿಂದ ಶಾಂತಿಯುತ ಹೋರಾಟ ಮಾಡಿ. ದಾರಿತಪ್ಪಿಸುವವರ ಮಾತು ಕೇಳಿ ಭವಿಷ್ಯವನ್ನು ಹಾಳುಮಾಡಿಕೊಳ್ಳಬೇಡಿ. ಶಾಂತಿಯುತ ಹೋರಾಟವೇ ಜಗತ್ತಲ್ಲಿ ಇದುವರೆಗೂ ಜಯಗಳಿಸಿದೆ ಎಂಬುದನ್ನು ಮರೆಯಬೇಡಿ.ಈ ರೀತಿ ಟೈರಿಗೆ ಬೆಂಕಿ ಹಚ್ಚುವುದಾಗಲೀ ಅಥವಾ ತಮಿಳು ನಾಡಿನ ವಾಹನಗಳಿಗೆ ಬೆಂಕಿ ಹಚ್ಚುವುದಾಗಲಿ ಅಥವಾ ಬೇರೆಯವರ ಮೇಲೆ ಹಲ್ಲೆ ಮಾಡುವುದಾಗಲೀ ಮಾಡದೆ ಶಾಂತಿಯುತವಾಗಿ ನಿಮ್ಮ ಪ್ರತಿಭಟನೆ ಮಾಡಿ"
