ಬಲ ತಂದ ನಿರ್ಣಯ; ಮುತ್ಸದ್ಧಿತನ ತೋರಲಿ ಸರ್ವೋಚ್ಚ ನ್ಯಾಯಾಲಯ
ಬೆಂಗಳೂರು (ಸೆ.23): ಕಾವೇರಿ ಬಿಕ್ಕಟ್ಟು ಕುರಿತು ಸದನ ಕೈಗೊಂಡ ನಿರ್ಣಯ ಮುಂದಿನ ಕಾನೂನು ಹೋರಾಟಕ್ಕೆ ಇನ್ನಷ್ಟುನೈತಿಕ ಬಲ ತಂದುಕೊಟ್ಟಿದೆ. ಈ ಸದನದ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ಸಂಘರ್ಷವೆಂದು ಪರಿಗಣಿಸದೇ ಮುತ್ಸದ್ದಿತನ ತೋರಿ ಆದೇಶದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಕಣ್ಣು ತೆರೆದು ಅವಲೋಕಿಸಬೇಕಿದೆ ಎಂದು ಮಾಜಿ ಅಡ್ವೊಕೇಟ್ ಜನರಲ್ಗಳಾದ ಬಿ.ವಿ.ಆಚಾರ್ಯ ಮತ್ತು ಪ್ರೊ.ರವಿವರ್ಮಕುಮಾರ್ ತಿಳಿಸಿದ್ದಾರೆ.
ಬಿ.ವಿ.ಆಚಾರ್ಯ ಹೇಳಿದ್ದೇನು?
-ಸದನದ ನಿರ್ಣಯ ಕಾನೂನು ಹೋರಾಟಕ್ಕೆ ಇನ್ನಷ್ಟುಸ್ಥೈರ್ಯ ತುಂಬುವಂತೆ ಮಾಡಿದೆ. ಕುಡಿಯುವ ನೀರಿನ ಸಮಸ್ಯೆಯ ಕುರಿತು ಸದನ ಅವಿರೋಧ ನಿರ್ಣಯ ಕೈಗೊಂಡಿದೆ. ಈ ಮೂಲಕ ನೀರಾವರಿ ಅಲ್ಲ ಕುಡಿಯುವ ನೀರು ಅವಶ್ಯಕ ಎಂದಿದೆ.
-ಇದೀಗ ಸುಪ್ರೀಂಕೋರ್ಟ್ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತದೆಂಬ ಮೇಲೆ ಮುಂದಿನ ನಡೆ ನಿಂತಿದೆ. ಸುಪ್ರೀಂಕೋರ್ಟ್ ಒಂದೊಮ್ಮೆ ನ್ಯಾಯಾಂಗ ನಿಂದನೆ ಕೈಗೆತ್ತಿಕೊಂಡರೆ ಸರ್ಕಾರವನ್ನು(ಕ್ಯಾಬಿನೆಟ್) ಅಥವಾ ಮುಖ್ಯ ಕಾರ್ಯದರ್ಶಿಯವರನ್ನು ಪ್ರತಿವಾದಿಯಾಗಿಸುತ್ತದೆಯೋ ಕಾದು ನೋಡಬೇಕಿದೆ.
- ಸಿಎಸ್ ಅವರನ್ನು ಪ್ರತಿವಾದಿ ಮಾಡಿದರೂ ಸಚಿವ ಸಂಪುಟದ ಆದೇಶ ಪಾಲಿಸಬೇಕಿದ್ದುದು ಕರ್ತವ್ಯ ಆಗಿರುವುದರಿಂದ ಶಿಕ್ಷೆ ವಿಧಿಸುವುದು ಸಾಧ್ಯವಾಗದು.
- ಸಾಂವಿಧಾನಿಕ ಬಿಕ್ಕಟ್ಟು ಉದ್ಭವ ಆಗದು. ಸರ್ಕಾರ ಮುಂದಿನ ವಿಚಾರಣೆ ವೇಳೆ ಉನ್ನತ ಪೀಠಕ್ಕೆ ವರ್ಗಾಯಿಸಲು ಕೋರಲೂಬಹುದು. ಅಥವಾ ನ್ಯಾಯಪೀಠವೇ ತನ್ನ ತಪ್ಪುಗಳನ್ನು ಅರಿತು ಉನ್ನತ ಪೀಠಕ್ಕೆ ಶಿಫಾರಸು ಮಾಡಬಹುದು. ಸಾಂವಿಧಾನಿಕ ಪೀಠಕ್ಕೆ (5 ನ್ಯಾಯಾಧೀಶರು) ಸಲ್ಲಿಸುವಂತೆ ರಾಜ್ಯ ಮನವಿ ಮಾಡಬಹುದು.
- ತಮಿಳುನಾಡು ನೀರು ಬಿಟ್ಟಿಲ್ಲವೆಂಬ ವಿಚಾರವನ್ನಷ್ಟೇ ಮುಂದಿಟ್ಟುಕೊಂಡು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬಹುದು. ವಿಚಾರಣೆ ವೇಳೆ ಸದನದ ನಿರ್ಣಯ ಮುಂದಿಟ್ಟು ಕರ್ನಾಟಕ ಸುಪ್ರೀಂ ಕೋರ್ಟ್ ಆದೇಶವನ್ನು ಉದ್ದೇಶಪೂರ್ವಕವಾಗಿಯೇ ಉಲ್ಲಂಘಿಸಿದೆ ಎಂದು ವಾದಿಸಬಹುದು.
ಪ್ರೊ.ರವಿವರ್ಮ ಕುಮಾರ್ ಹೇಳಿದ್ದೇನು?
-ಸದನದ ನಿರ್ಣಯ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವುದಿಲ್ಲ. ಸದನ ತನಗಿರುವ ಅಧಿಕಾರ ಚಲಾಯಿಸಿದೆ ಅಷ್ಟೇ. ಆದರೆ ಸದನದ ನಿರ್ಣಯವನ್ನು ಪರಾಮರ್ಶಿಸುವ ಅಧಿಕಾರ ಸುಪ್ರೀಂ ಕೋರ್ಟ್ಗಿದೆ.
-ಸದನಕ್ಕೆ ಸಾರ್ವಭೌಮತೆ ಇದೆ. ಸದನದ ನಿರ್ಣಯಗಳನ್ನು ಸುಪ್ರೀಂಕೊರ್ಟ್ಗೆ ಪ್ರಶ್ನಿಸಲು ಅವಕಾಶವಿಲ್ಲ. ಸದನ ಕಲಾಪಗಳ ಕುರಿತು ಯಾವುದೇ ಆದೇಶ ನೀಡಲೂ ಬರುವುದಿಲ್ಲ
-ಸದನ ಒಕ್ಕೊರಲಿನ ತೀರ್ಮಾನ ಕೈಗೊಳ್ಳುವ ಸನ್ನಿವೇಶ ನಿರ್ಮಾಣವಾಗಿದ್ದನ್ನು ವಿಶ್ಲೇಷಿಸಿ ಸುಪ್ರೀಂಕೋರ್ಟ್ ಕಣ್ತೆರೆದು ನೋಡಬೇಕು. ನ್ಯಾಯಾಂಗದ ವಿರುದ್ಧದ ನಿರ್ಣಯ ಎಂದು ಪರಿಗಣಿಸದೇ ನ್ಯಾಯಪೀಠ ಮುತ್ಸದ್ಧಿತನ ತೋರಬೇಕು.
-ಸದನದ ನಿರ್ಣಯವನ್ನು ಸುಪ್ರಿಂಕೋರ್ಟ್ ಗೌರವಿಸಬೇಕು. ಕೇವಲ ಸರ್ಕಾರಿ ಆದೇಶದಂತೆ ಪರಿಗಣಿಸಬಾರದು.
-ಸದನದ ಕಲಾಪಗಳ ವಿವರ ಪಡೆಯುವ ಅಧಿಕಾರ ಸರ್ವೋಚ್ಛ ನ್ಯಾಯಾಲಯಕ್ಕಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕವಾಗಿ ರರಚನೆಯಾದ ಎರಡೂ ಅಂಗಗಳನ್ನು ಪರಸ್ಪರ ಗೌರವಿಸಬೇಕಿದೆ.