ಬೆಂಗಳೂರು (ಸೆ.23): ಕಾವೇರಿ ಬಿಕ್ಕಟ್ಟು ಕುರಿತು ಸದನ ಕೈಗೊಂಡ ನಿರ್ಣಯ ಮುಂದಿನ ಕಾನೂನು ಹೋರಾಟಕ್ಕೆ ಇನ್ನಷ್ಟುನೈತಿಕ ಬಲ ತಂದುಕೊಟ್ಟಿದೆ. ಈ ಸದನದ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ಸಂಘರ್ಷವೆಂದು ಪರಿಗಣಿಸದೇ ಮುತ್ಸದ್ದಿತನ ತೋರಿ ಆದೇಶದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಕಣ್ಣು ತೆರೆದು ಅವಲೋಕಿಸಬೇಕಿದೆ ಎಂದು ಮಾಜಿ ಅಡ್ವೊಕೇಟ್‌ ಜನರಲ್‌ಗಳಾದ ಬಿ.ವಿ.ಆಚಾರ್ಯ ಮತ್ತು ಪ್ರೊ.ರವಿವರ್ಮಕುಮಾರ್‌ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿ.ವಿ.ಆಚಾರ್ಯ ಹೇಳಿದ್ದೇನು? 

-ಸದನದ ನಿರ್ಣಯ ಕಾನೂನು ಹೋರಾಟಕ್ಕೆ ಇನ್ನಷ್ಟುಸ್ಥೈರ್ಯ ತುಂಬುವಂತೆ ಮಾಡಿದೆ. ಕುಡಿಯುವ ನೀರಿನ ಸಮಸ್ಯೆಯ ಕುರಿತು ಸದನ ಅವಿರೋಧ ನಿರ್ಣಯ ಕೈಗೊಂಡಿದೆ. ಈ ಮೂಲಕ ನೀರಾವರಿ ಅಲ್ಲ ಕುಡಿಯುವ ನೀರು ಅವಶ್ಯಕ ಎಂದಿದೆ.

-ಇದೀಗ ಸುಪ್ರೀಂಕೋರ್ಟ್‌ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತದೆಂಬ ಮೇಲೆ ಮುಂದಿನ ನಡೆ ನಿಂತಿದೆ. ಸುಪ್ರೀಂಕೋರ್ಟ್‌ ಒಂದೊಮ್ಮೆ ನ್ಯಾಯಾಂಗ ನಿಂದನೆ ಕೈಗೆತ್ತಿಕೊಂಡರೆ ಸರ್ಕಾರವನ್ನು(ಕ್ಯಾಬಿನೆಟ್‌) ಅಥವಾ ಮುಖ್ಯ ಕಾರ್ಯದರ್ಶಿಯವರನ್ನು ಪ್ರತಿವಾದಿಯಾಗಿಸುತ್ತದೆಯೋ ಕಾದು ನೋಡಬೇಕಿದೆ.

- ಸಿಎಸ್‌ ಅವರನ್ನು ಪ್ರತಿವಾದಿ ಮಾಡಿದರೂ ಸಚಿವ ಸಂಪುಟದ ಆದೇಶ ಪಾಲಿಸಬೇಕಿದ್ದುದು ಕರ್ತವ್ಯ ಆಗಿರುವುದರಿಂದ ಶಿಕ್ಷೆ ವಿಧಿಸುವುದು ಸಾಧ್ಯವಾಗದು.

- ಸಾಂವಿಧಾನಿಕ ಬಿಕ್ಕಟ್ಟು ಉದ್ಭವ ಆಗದು. ಸರ್ಕಾರ ಮುಂದಿನ ವಿಚಾರಣೆ ವೇಳೆ ಉನ್ನತ ಪೀಠಕ್ಕೆ ವರ್ಗಾಯಿಸಲು ಕೋರಲೂಬಹುದು. ಅಥವಾ ನ್ಯಾಯಪೀಠವೇ ತನ್ನ ತಪ್ಪುಗಳನ್ನು ಅರಿತು ಉನ್ನತ ಪೀಠಕ್ಕೆ ಶಿಫಾರಸು ಮಾಡಬಹುದು. ಸಾಂವಿಧಾನಿಕ ಪೀಠಕ್ಕೆ (5 ನ್ಯಾಯಾಧೀಶರು) ಸಲ್ಲಿಸುವಂತೆ ರಾಜ್ಯ ಮನವಿ ಮಾಡಬಹುದು.

- ತಮಿಳುನಾಡು ನೀರು ಬಿಟ್ಟಿಲ್ಲವೆಂಬ ವಿಚಾರವನ್ನಷ್ಟೇ ಮುಂದಿಟ್ಟುಕೊಂಡು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬಹುದು. ವಿಚಾರಣೆ ವೇಳೆ ಸದನದ ನಿರ್ಣಯ ಮುಂದಿಟ್ಟು ಕರ್ನಾಟಕ ಸುಪ್ರೀಂ ಕೋರ್ಟ್‌ ಆದೇಶವನ್ನು ಉದ್ದೇಶಪೂರ್ವಕವಾಗಿಯೇ ಉಲ್ಲಂಘಿಸಿದೆ ಎಂದು ವಾದಿಸಬಹುದು.

ಪ್ರೊ.ರವಿವರ್ಮ ಕುಮಾರ್‌ ಹೇಳಿದ್ದೇನು? 

-ಸದನದ ನಿರ್ಣಯ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವುದಿಲ್ಲ. ಸದನ ತನಗಿರುವ ಅಧಿಕಾರ ಚಲಾಯಿಸಿದೆ ಅಷ್ಟೇ. ಆದರೆ ಸದನದ ನಿರ್ಣಯವನ್ನು ಪರಾಮರ್ಶಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗಿದೆ.

-ಸದನಕ್ಕೆ ಸಾರ್ವಭೌಮತೆ ಇದೆ. ಸದನದ ನಿರ್ಣಯಗಳನ್ನು ಸುಪ್ರೀಂಕೊರ್ಟ್‌ಗೆ ಪ್ರಶ್ನಿಸಲು ಅವಕಾಶವಿಲ್ಲ. ಸದನ ಕಲಾಪಗಳ ಕುರಿತು ಯಾವುದೇ ಆದೇಶ ನೀಡಲೂ ಬರುವುದಿಲ್ಲ

-ಸದನ ಒಕ್ಕೊರಲಿನ ತೀರ್ಮಾನ ಕೈಗೊಳ್ಳುವ ಸನ್ನಿವೇಶ ನಿರ್ಮಾಣವಾಗಿದ್ದನ್ನು ವಿಶ್ಲೇಷಿಸಿ ಸುಪ್ರೀಂಕೋರ್ಟ್‌ ಕಣ್ತೆರೆದು ನೋಡಬೇಕು. ನ್ಯಾಯಾಂಗದ ವಿರುದ್ಧದ ನಿರ್ಣಯ ಎಂದು ಪರಿಗಣಿಸದೇ ನ್ಯಾಯಪೀಠ ಮುತ್ಸದ್ಧಿತನ ತೋರಬೇಕು.

-ಸದನದ ನಿರ್ಣಯವನ್ನು ಸುಪ್ರಿಂಕೋರ್ಟ್‌ ಗೌರವಿಸಬೇಕು. ಕೇವಲ ಸರ್ಕಾರಿ ಆದೇಶದಂತೆ ಪರಿಗಣಿಸಬಾರದು.

-ಸದನದ ಕಲಾಪಗಳ ವಿವರ ಪಡೆಯುವ ಅಧಿಕಾರ ಸರ್ವೋಚ್ಛ ನ್ಯಾಯಾಲಯಕ್ಕಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕವಾಗಿ ರರಚನೆಯಾದ ಎರಡೂ ಅಂಗಗಳನ್ನು ಪರಸ್ಪರ ಗೌರವಿಸಬೇಕಿದೆ.