ಕಾರ್ಲ್ ಟನ್ ಕಟ್ಟಡಕ್ಕೆ ಮರು ಜೀವ: ಭೂತ ಬಂಗಲೆಯಾಗಿದ್ದ ಕಟ್ಟಡದಲ್ಲಿ ಮತ್ತೆ ವಾಣಿಜ್ಯ ವಹಿವಾಟು ಆರಂಭ
ಅಂದು ನಡೆದು ಅಗ್ನಿ ದುರಂತ ಇಡೀ ಕಟ್ಟಡಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಿತ್ತು. ಒಂದಲ್ಲ, ಎರಡಲ್ಲ, ಬರೋಬ್ಬರಿ ಆರು ವರ್ಷಗಳ ಕಾಲ ಖಾಲಿ ಬಂಗಲೆ ಆಗಿತ್ತು. ಇದೀಗ ಮತ್ತೆ ತನ್ನ ಹಳೇ ವೈಭವ ಮೆಲುಕು ಹಾಕಲು ಸಿದ್ದಗೊಂಡಿದೆ.
ಬೆಂಗಳೂರು(ಜು.02): ಅಂದು ನಡೆದು ಅಗ್ನಿ ದುರಂತ ಇಡೀ ಕಟ್ಟಡಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಿತ್ತು. ಒಂದಲ್ಲ, ಎರಡಲ್ಲ, ಬರೋಬ್ಬರಿ ಆರು ವರ್ಷಗಳ ಕಾಲ ಖಾಲಿ ಬಂಗಲೆ ಆಗಿತ್ತು. ಇದೀಗ ಮತ್ತೆ ತನ್ನ ಹಳೇ ವೈಭವ ಮೆಲುಕು ಹಾಕಲು ಸಿದ್ದಗೊಂಡಿದೆ.
ಈ ಅವಘಡವನ್ನು ಬೆಂಗಳೂರಿನ ಜನ ಮರೆಯೋದೇ ಇಲ್ಲ. ಹಳೆ ವಿಮಾನ ನಿಲ್ದಾಣದ ಬಳಿಯಿರುವ ಡೈಮಂಡ್ ಡಿಸ್ಟ್ರಿಕ್ಟ್ ಕಾರ್ಲ್'ಟನ್ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 9 ಮಂದಿ ಉಸಿರುಗಟ್ಟಿ ಮೃತಪಟ್ಟಿದ್ದರು. ಈ ಹಿಂದೆ ಸಿಲಿಕಾನ್ ಸಿಟಿಯಲ್ಲಿ ಇಂತಹ ಭೀಕರ ಅಗ್ನಿ ಅವಘಡ ಪ್ರಕರಣ ನಡೆದಿರಲಿಲ್ಲ. ನೂರಾರು ಮಳಿಗೆಗಳಿದ್ದ ಈ ಕಟ್ಟಡದಲ್ಲಿ ಸುರಕ್ಷತಾ ಕ್ರಮ ತೆಗೆದುಕೊಳ್ಳದೆ ಇದ್ದದ್ದೇ ಈ ದುರಂತಕ್ಕೆ ಕಾರಣವಾಗಿತ್ತು. 6 ವರ್ಷಗಳ ಬಳಿಕ ಯಾವುದೇ ವ್ಯಾಪಾರ ವಹಿವಾಟು ನಡೆಸಲು ಸರ್ಕಾರ ಅನುಮತಿ ನೀಡಿರಲಿಲ್ಲ. ಅದರಲ್ಲೂ ಮುಖ್ಯವಾಗಿ ಈ ಕಟ್ಟಡದಲ್ಲಿ ಭೂತ ಪ್ರೇತಗಳ ಕಾಟವಿದೆ ಅಂತೆಲ್ಲಾ ಆರೋಪ ಹರಡಿತ್ತು. ಆದ್ರೀಗ ವ್ಯಾಪಾರ ವಹಿವಾಟಿಗೆ ಬಿಬಿಎಂಪಿ ಅನುಮತಿ ನೀಡಿದೆ.
ವ್ಯಾಪಾರ ಆರಂಭವಾಗಿರುವ ಕಾರ್ಲ್ ಟನ್ ಟವರ್ ಕಟ್ಟಡದಲ್ಲಿ ಇದೀಗ 20 ಮಳಿಗೆಗಳು ಇವೆ. ಎ.ಮತ್ತು ಬಿ ಬ್ಲಾಕ್ ನ7 ಅಂತಸ್ತಿನ ಕಟ್ಟಡದಲ್ಲಿ 160 ಮಳಿಗೆಗಳು ಇವೆ. ಆದರೆ 2010.ಫೆ 23 ರಂದು ನಡೆದ ದುರಂತ ಬಳಿಕ ಇಲ್ಲಿ ಯಾವುದೇ ವಾಣಿಜ್ಯ ವಹಿವಾಟು ನಡೆದಿರಲಿಲ್ಲ. ಇದೀಗ ಅಗ್ನಿ ಅವಘಡ ನಡೆಯದಂತೆ 1500 ಕೆವಿ ಜನರೆಟರ್, ಹೊಸದಾಗಿ ಲಿಫ್ಟ್ ,ಅಗ್ನಿ ಶಾಮಕದಳದ ವಾಹನ ಕಟ್ಟಡ ಪ್ರವೇಶಕ್ಕೆ ಬೇಕಾಗುವ ಸ್ಥಳವಕಾಶ, ಪ್ರತಿಯೊಂದು ಬ್ಲಾಕ್ ನಲ್ಲೂ ಮೂರು ಕಡೆ ಸ್ಟೇರ್ ಕೇಸ್ ಸೇರಿದಂತೆ ವಿವಿಧ ಸುರಕ್ಷತಾ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ. ಈ ಬಗ್ಗೆ ಹತ್ತು ಹಲವು ಭಾರಿ ಪರಿಶೀಲನೆ ನಡೆಸಿದ ಅಗ್ನಿಶಾಮಕದಳ, ಬಿಬಿಎಂಪಿ, ಜೂನ್ ತಿಂಗಳಲ್ಲಿ ವಾಣಿಜ್ಯ ವಹಿವಾಟಿಗೆ ನಿರಪೇಕ್ಷಣಾ ಪತ್ರ ನೀಡಿದೆ.ಈ ಕುರಿತಾದ ದಾಖಲೆ ಸುವರ್ಣ ನ್ಯೂಸ್'ಗೆ ದೊರೆತಿದೆ.
ಬರೋಬ್ಬರಿ ಆರು ವರ್ಷಗಳ ಬಳಿಕ 2017ರ ಜೂನ್ 1 ರಿಂದ ವಾಣಿಜ್ಯ ವಹಿವಾಟು ಆರಂಭವಾಗಿದೆ. ಆರು ಕೋಟಿ ಖರ್ಚು ಮಾಡಿ ಸುರಕ್ಷತಾ ಕ್ರಮ ತೆಗೆದುಕೊಂಡಿರುವ ಕಟ್ಟಡ ಮಾಲೀಕರ ಸಂಘ ವ್ಯಾಪಾರಿಗಳಿಗೆ ಆಹ್ವಾನ ನೀಡಿದ್ದಾರೆ. ಒಟ್ನಲ್ಲಿ 9 ಮಂದಿ ಸಾವಿಗೆ
ಕಾರಣವಾದ ಈ ಕಟ್ಟಡ ತನ್ನ ಹಳೆ ವೈಭವವನ್ನು ಮತ್ತೆ ಮರುಕಳಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.