KSRTC ಬಸ್, ಕಾರು ಡಿಕ್ಕಿ: ಒಂದೇ ಕುಟುಂಬದ ಮೂವರ ದುರ್ಮರಣ
ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಭೀಕರ ಅಪಘಾತ| ಕಾರು, ಬಸ್ ನಡುವಿನ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ದುರ್ಮರಣ
ಹಾಸನ[ಮಾ.13]: ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಲಕ್ಷ್ಮಿದೇವರಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ KSRTC ಬಸ್ ಮತ್ತು ಮಾರುತಿ ಓಮ್ನಿ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು ಶಿವಮೊಗ್ಗ ರಾಗಿಗುಡ್ಡ ನಿವಾಸಿಗಳಾದ ಸಾಧಿಕ್(22) ಮುಜೀಬಾ(53), ಮುಸ್ಕಾನ್(19) ಮೃತಪಟ್ಟವರೆಂದು ಗುರುತಿಸಲಾಗಿದೆ. ರಾತ್ರಿ ಸುಮಾರು 1.30ಕ್ಕೆ ಈ ದುರ್ಘಟನೆ ಸಂಭವಿಸಿದ್ದು, ಅತಿ ವೇಗವಾಗಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.
ಅಪಘಾತದಲ್ಲಿ ಶಲೀನಾ ಬಾನು, ಇಮ್ರಾನ್ ಅಹಮದ್, ಶಲೀನಾ ತಾಜ್ ಮತ್ತು ಮೊಹಮದ್ ಶಲೀನಾರಿಗೆ ಗಂಭೀರ ಗಾಯಗಳಾಗಿದ್ದು, ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಸೀಕೆರೆ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.