ನವದೆಹಲಿ (ಸೆ.28): ಸಿಬಿಐ ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಹಿರಿಯ ಅಧಿಕಾರಿ ಬಿ.ಕೆ ಬನ್ಸಾಲ್ ಮಗನ ಜೊತೆ ನೇಣಿಗೆ ಶರಣಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿರಿಯ ಅಧಿಕಾರಿಗಳು ಬನ್ಸಾಲ್ ಪತ್ನಿ ಹಾಗೂ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದ ಅವರು ಜುಲೈನಲ್ಲಿ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಬನ್ಸಾಲ್ ರವರು ಮನನೊಂದಿದ್ದರು. ಇದೇ ಕೊರಗಿನಲ್ಲಿ ನಿನ್ನೆ ರಾತ್ರಿ ಮಗನೊಂದಿಗೆ ದೆಹಲಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ.

ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಸಿಬಿಐ ಹಿರಿಯ ಅಧಿಕಾರಿ ಸಂಜೀವ್ ಗೌತಮ್ ರವರನ್ನು ಉದ್ದೇಶಿಸಿ, ನಿಮ್ಮ ಮುಂದಿನ ಪೀಳಿಗೆ ನನ್ನ ಹೆಸರು ಕೇಳಿದರೆ ಭಯ ಬೀಳಲಿದೆ ಎಂದು ಬರೆದಿದ್ದಾರೆ. ಜೊತೆಗೆ ತಮ್ಮ ಪತ್ನಿಗೆ ಹಿಂಸೆ ನೀಡುತ್ತಿದ್ದ ಮೂವರು ಸಿಬಿಐ ಅಧಿಕಾರಿಗಳ ಹೆಸರನ್ನು ಬರೆದಿಟ್ಟಿದ್ದಾರೆ.

ಗೌತಮ್‌ ಅವರು ಬಿಜೆಪಿ ಅಧ್ಯಕ್ಷ ಅಮಿತ್‌ ಶಾಗೆ ಆಪ್ತರು ಎಂಬ ವಾದ ಕೇಳಿಬಂದಿದ್ದು, ಈ ಅಂಶವನ್ನು ಬಿಜೆಪಿ ನಿರಾಕರಿಸಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಈ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಆಂತರಿಕ ವಿಚಾರಣೆ ನಡೆಸಲು ತಂಡವನ್ನು ನೇಮಿಸಿದೆ. ಸಿಬಿಐ ವಕ್ತಾರ ಆರ್‌.ಕೆ.ಗೌರ್‌ ಮಾತನಾಡಿ ದೆಹಲಿ ಪೊಲೀಸರು ಆತ್ಮಹತ್ಯಾ ಪತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದಿದ್ದಾರೆ. ಜೈಲಲ್ಲಿ ಅಧಿಕಾರಿಗಳು ಪತ್ನಿ, ಮಗಳಿಗೆ ಹೊಡೆದಿದ್ದಾರೆ. ಅವರಿಬ್ಬರು ಸಾಯುವಂತೆ ಹೊಡೆಯಬೇಕು ಎಂದು ಅವರು ತಮ್ಮ ನೆರೆಯವರಿಗೆ ಹೇಳಿದ್ದರು ಎಂದು ಗೊತ್ತಾಗಿದೆ

ಇವರ ಮಗನೂ ಡೆತ್ ನೋಟ್ ಬರೆದಿಟ್ಟಿದ್ದು, ನಾನು ಯೋಗೇಶ್ ಕುಮಾರ್, ಅಸಹಾಯಕನಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ಮಾನಸಿಕವಾಗಿ, ಮತ್ತು ದೈಹಿಕವಾಗಿ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರು. ನನ್ನ ತಾಯಿ ಮತ್ತು ಸಹೋದರಿ ಐವರು ಸಿಬಿಐ ಅಧಿಕಾರಿಗಳಿಂದ ಕಿರುಕುಳ ಅನುಭವಿಸುತ್ತಿದ್ದರು ಎಂದು ಬರೆದಿದ್ದಾರೆ.