ಸಿದ್ದರಾಮಯ್ಯ ದೇಶ ಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ: ಬಿಎಸ್'ವೈ
ಗೋವಿಂದರಾಜು ಅವರನ್ನು ದೂರವಿಟ್ಟಿರೋದು ಹಾಗೂ ಗೋವಿಂದರಾಜು ದೆಹಲಿಗೆ ಹೋಗಿ ಛೀಮಾರಿ ಹಾಕಿಸಿಕೊಂಡು ಬಂದಿರೋದು, ಇವೆರಡು ಘಟನೆಗಳು ಗೋವಿಂದರಾಜು ಡೈರಿಯಲ್ಲಿರುವುದು ಸತ್ಯಾಂಶ ಎನ್ನುವುದಕ್ಕೆ ಸಾಕ್ಷಿಯಾಗಿವೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು(ಮಾ. 02): ತನ್ನನ್ನು ಪದೇ ಪದೇ ಭ್ರಷ್ಟ ಎಂದು ಟೀಕಿಸುವ ಸಿಎಂ ಸಿದ್ದರಾಮಯ್ಯಗೆ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರು ದೇಶ ಕಂಡ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂದು ಯಡಿಯೂರಪ್ಪ ಬಣ್ಣಿಸಿದ್ದಾರೆ. ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಮಾಜಿ ಸಿಎಂ ಯಡಿಯೂರಪ್ಪ, ತಾನು ಸಿಎಂ ಮತ್ತು ಕಾಂಗ್ರೆಸ್ಸಿಗರ ಬೆದರಿಕೆಗೆ ಜಗ್ಗದೇ ಹೋರಾಟ ಮುಂದುವರಿಸುವುದಾಗಿ ಪಣತೊಟ್ಟಿದ್ದಾರೆ.
ಗೋವಿಂದರಾಜು ಅವರನ್ನು ದೂರವಿಟ್ಟಿರೋದು ಹಾಗೂ ಗೋವಿಂದರಾಜು ದೆಹಲಿಗೆ ಹೋಗಿ ಛೀಮಾರಿ ಹಾಕಿಸಿಕೊಂಡು ಬಂದಿರೋದು, ಇವೆರಡು ಘಟನೆಗಳು ಗೋವಿಂದರಾಜು ಡೈರಿಯಲ್ಲಿರುವುದು ಸತ್ಯಾಂಶ ಎನ್ನುವುದಕ್ಕೆ ಸಾಕ್ಷಿಯಾಗಿವೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಗೋವಿಂದರಾಜು ಡೈರಿ ಪ್ರಕರಣದಲ್ಲಿ ಸಿಎಂ ಅವರೇ ರಾಜೀನಾಮೆ ಕೊಡಲಿದ್ದು, ಕೆಜೆ ಜಾರ್ಜ್ ತಲೆದಂಡದ ಅಗತ್ಯವಿಲ್ಲ ಎಂದೂ ಬಿಎಸ್'ವೈ ಈ ವೇಳೆ ಹೇಳಿದ್ದಾರೆ. ಇನ್ನೂ ಮುಂದುವರಿದ ಅವರು, ತಮ್ಮನ್ನು ಪದೇಪದೇ ಭ್ರಷ್ಟ ಎಂದು ಹೇಳುವ ವ್ಯಕ್ತಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ತಮ್ಮ ವಿರುದ್ಧದ ಡೀನೋಟಿಫಿಕೇಶನ್ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ತಾವು ಅಲ್ಪಸ್ವಲ್ಪ ಡೀನೋಟಿಫಿಕೇಶನ್ ಮಾಡಿರುವುದು ನಿಜವಾದರೂ ಅದೆಲ್ಲವೂ ರೈತರಿಗೋಸ್ಕರ ಮಾಡಲಾಗಿತ್ತು. ಸಿಎಂ ಆಗಿ ಅದು ತಮ್ಮ ಕರ್ತವ್ಯವಾಗಿತ್ತು ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.